ಕಲಬುರಗಿ : ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಕಾರಿನ ಡಿಕ್ಕಿಯಲ್ಲಿ ಸಿಲುಕಿ ಉಸಿರುಗಟ್ಟಿ 3 ವರ್ಷದ ಮಗು ಮೃತಪಟ್ಟಿದೆ.
ತೊನಸನಹಳ್ಳಿ ಗ್ರಾಮದ ಕೊಟ್ಟುರೇಶ್ವರ ಪೂಜ್ಯರ ಪುತ್ರ ಬಸವಪ್ರಭು (3) ಮೃತ ಬಾಲಕನಾಗಿದ್ದಾನೆ.
ಮನೆ ಮುಂಭಾಗ ನಿಲ್ಲಿಸಿದ್ದ ಕಾರಿನ ಬಳಿ ಆಟವಾಡುತ್ತಿದ್ದ ವೇಳೆ ಬಾಲಕ ಕಾರಿನ ಡಿಕ್ಕಿ ತೆರೆದು ಒಳಗೆ ಸೇರಿದ್ದಾನೆ ಎನ್ನಲಾಗಿದೆ.
ಈ ವೇಳೆ ದುರಾದೃಷ್ಟವಶಾತ್ ಕಾರಿನ ಡಿಕ್ಕಿ ಏಕಾಏಕಿ ಲಾಕ್ ಆಗಿದ್ದು, ಬಾಲಕ ಹೊರಬರಲು ಸಾಧ್ಯವಾಗಿಲ್ಲ. ಕೆಲ ಸಮಯದ ಬಳಿಕ ಮಗುವಿಗಾಗಿ ಹುಡುಕಾಟ ನಡೆಸಿದ ಕುಟುಂಬಸ್ಥರು, ಕಾರಿನ ಡಿಕ್ಕಿಯೊಳಗೆ ಬಸವಪ್ರಭುವನ್ನು ಪತ್ತೆಹಚ್ಚಿದ್ದಾರೆ.
ತಕ್ಷಣ ಹೊರತೆಗೆದರೂ ಅಷ್ಟರಲ್ಲಾಗಲೇ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


