ಕಡಬ ; ಕಡಬದಿಂದ ಸುಳ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯೊಂದು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸುತ್ತಿದ್ದರೂ ಜನಪ್ರತಿನಿಧಿಗಳು,ಅಧಿಕಾರಿಗಳು ಜಾಣ ಕುರುಡರಂತೇ ವರ್ತಿಸುತ್ತಿದ್ದಾರೆ ಎಂಬುದಾಗಿ ಮಾಧ್ಯಮದಲ್ಲಿ ವರದಿ ಬಿತ್ತರವಾದ ಬೆನ್ನಲ್ಲೇ ಸುಳ್ಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಹದಿನೈದು ದಿನಗಳ ಒಳಗಾಗಿ ರಸ್ತೆ ದುರಸ್ತಿಯ ಭರವಸೆ ನೀಡಿದ್ದಾರೆ.
ಕಡಬದಿಂದ ಕೋಡಿಂಬಾಳ ಮೂಲಕ ಸುಳ್ಯ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಯು ಕಡಬದಿಂದ ಸುಮಾರು ಎರಡು ಕಿಮೀ ದೂರದ ಓಂತ್ರಡ್ಕ ಶಾಲೆ ವರೆಗೆ ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಈ ಎರಡು ಕಿಮೀ ರಸ್ತೆಯುದ್ದಕ್ಕೂ ಅಲ್ಲಲ್ಲಿ ಬಾರೀ ಗಾತ್ರದ ಗುಂಡಿಗಳು ಉಂಟಾದರೂ ಸುಳ್ಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಏನೂ ಆಗಿಲ್ಲ ಎಂಬತೇ ಜಾಣ ಮೌನ ವರಿಸಿದ್ದಾರೆ ಎಂಬುದಾಗಿ ವರದಿ ಪ್ರಸಾರ ಮಾಡಿತ್ತು.
ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಗಳನ್ನು ಮಳೆಗಾಲದಲ್ಲೂ ಸರಿಪಡಿಸಲಾಗಿರಲಿಲ್ಲ.ಎರಡೂ ಬದಿಗಳಲ್ಲಿ ಕಾಡು ಆವರಿಸಿರುವುದನ್ನು ಕಾಟಾಚಾರಕ್ಕೆ ಎಂಬತೇ ಸ್ವಲ್ಪ ಮಟ್ಟಿಗೆ ಕಡಿಯಲಾಯಿತು.ಇನ್ನೂ ಇಲ್ಲಿನ ಸಾರ್ವಜನಿಕ ಸ್ಮಶಾನದ ಗುಡ್ದದಿಂದ ಹಿಡಿದು ರಸ್ತೆಯ ಬದಿಗಳಲ್ಲಿನ ಗುಡ್ಡಗಳಿಂದ ಹರಿದು ಬರುವ ಮತ್ತು ರಸ್ತೆಯ ಬದಿಗಳಲ್ಲಿನ ಪೆಟ್ರೋಲ್ ಪಂಪ್ ಸೇರಿದಂತೆ ಕಟ್ಟಡಗಳಿಂದ ಹರಿದು ಬರುವ ನೀರು ಸಹಾ ಮುಖ್ಯ ರಸ್ತೆಯಲ್ಲೇ ಹರಿಯುತ್ತಿರುವ ಬಗ್ಗೆ ಮತ್ತು ಕೇರಳ,ಮಡಿಕೇರಿ ಸೇರಿದಂತೆ ಮತ್ತು ಸುಳ್ಯ ಕಡಬ ಎಂಬ ಎರಡು ತಾಲೂಕುಗಳನ್ನು ಸಂಪರ್ಕಿಸುವ ಈ ರಾಜ್ಯ ಹೆದ್ದಾರಿಯನ್ನು ಕೂಡಲೇ ಸಂಬಂಧಿಸಿದ ಇಲಾಖೆ ದುರಸ್ತಿ ಅಥವಾ ಪುನರ್ ಠಾರಿಂಗ್ ಮಾಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದರು.ಇದೀಗ ಸುಳ್ಯ ಲೋಕೋಪಯೋಗಿ ಇಲಾಖೆಯ ಎಇಇ ಗೋಪಾಲ್ ಹಾಗೂ ಸಹಾಯಕ ಇಂಜಿನಿಯರ್ಗಳಾದ ಪರಮೇಶ್ವರ್ ಮತ್ತು ಪ್ರೀತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಮುಖರಾದ ರಘುರಾಮ್,ಪ್ರಮೋದ್ ಮುಂತಾದವರು ಉಪಸ್ಥಿತರಿದ್ದರು.


