ಚಿಕ್ಕಮಗಳೂರು : ಹೋಟೆಲ್ನಲ್ಲಿ ವಡೆ ತಿನ್ನುತ್ತಿದ್ದ ವೇಳೆ ವಡೆಯಲ್ಲಿ ಹಲ್ಲಿ ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಹೊರನಾಡು ಗ್ರಾಮದ ಖಾಸಗಿ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರು ಮೂಲದ ಪ್ರವಾಸಿಗರ ಕುಟುಂಬ ಆತಂಕಕ್ಕೀಡಾಗಿದೆ.
ಪ್ರವಾಸಿಗರು ತಿಂಡಿ ಸೇವಿಸುತ್ತಿದ್ದ ವೇಳೆ ವಡೆಯೊಳಗೆ ಹಲ್ಲಿ ಮಿಕ್ಸ್ ಆಗಿದ್ದು, ಎಣ್ಣೆಯಲ್ಲಿ ರೋಸ್ಟ್ ಆಗಿರುವುದು ಕಂಡುಬಂದಿದೆ ಎನ್ನಲಾಗಿದೆ. ಕುಟುಂಬದ ಮಕ್ಕಳು ಕೂಡ ವಡೆ ಸೇವಿಸಿದ್ದರಿಂದ ಪೋಷಕರು ಆತಂಕಗೊಂಡಿದ್ದಾರೆ.
ವಡೆಯಲ್ಲಿ ಹಲ್ಲಿ ಪತ್ತೆಯಾಗಿರುವುದನ್ನು ಹೋಟೆಲ್ ಮಾಲೀಕರಿಗೆ ತೋರಿಸಿದಾಗ ಮಾತಿನ ಚಕಮಕಿ ನಡೆದಿದ್ದು, ಬಿಲ್ ನೀಡುವುದು ಬೇಡ ಎಂದು ಮಾಲೀಕರು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಮಕ್ಕಳ ಆರೋಗ್ಯದ ಬಗ್ಗೆ ಆತಂಕಗೊಂಡ ಪ್ರವಾಸಿ ಕುಟುಂಬ, ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆ.
ಘಟನೆ ಸಂಬಂಧ ಬೆಂಗಳೂರು ಮೂಲದ ಪ್ರವಾಸಿ ಅಭಿಷೇಕ್ ಅವರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೋಟೆಲ್ನಲ್ಲಿ ಆಹಾರ ತಯಾರಿಕೆಯ ವೇಳೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

