ಚಿಕ್ಕಮಗಳೂರು : ರಾಷ್ಟ್ರೀಯ ಹೆದ್ದಾರಿ-169ರ ಚಿಕ್ಕಮಗಳೂರು–ಉಡುಪಿ ಗಡಿಭಾಗದ ಮಾಳ ಘಾಟ್ನಲ್ಲಿ ರಸ್ತೆಯ ಮೇಲೆ ಆಯಿಲ್ ಸೋರಿಕೆಯಾಗಿರುವ ಶಂಕೆಯಿಂದ ಸರಣಿ ಅಪಘಾತಗಳು ಸಂಭವಿಸಿವೆ.



ರಸ್ತೆಯಲ್ಲಿ ಆಯಿಲ್ ಚೆಲ್ಲಿರುವ ಪರಿಣಾಮ ಹಲವು ಕಾರುಗಳು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು, ಕೆಲವು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಬ್ರೇಕ್ ಹಿಡಿಯದ ಕಾರಣ ವಾಹನಗಳು ಒಂದರ ಹಿಂದೆ ಒಂದರಂತೆ ಅಪಘಾತಕ್ಕೀಡಾಗಿವೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿಯಿಂದ ಆಯಿಲ್ ಲೀಕೇಜ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ರಸ್ತೆ ಉದ್ದಕ್ಕೂ ಜಾರುವ ಸ್ಥಿತಿ ನಿರ್ಮಾಣವಾಗಿದೆ.
ಅವಘಡದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಕಿಲೋಮೀಟರ್ಗಳವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ತೀವ್ರ ಮಳೆಯ ನಡುವೆ ವಾಹನ ಸವಾರರು ಪರದಾಡುವಂತಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಂಚಾರ ಸುಗಮಗೊಳಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ರಸ್ತೆ ಮೇಲಿನ ಆಯಿಲ್ ತೆರವುಗೊಳಿಸುವ ಕಾರ್ಯವೂ ನಡೆಯುತ್ತಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.


