ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಪಾಣಕ್ಕಾಡ್ ಸಯ್ಯದ್ ನಾಸಿರ್ ಅಬ್ದುಲ್ ಹಯ್ ಶಿಹಾಬುದ್ದೀನ್ ತಂಬಳ್ ಬಾ-ಅಲವಿ ಅವರನ್ನು ನೂತನ ಜಿಲ್ಲಾ ಖಾಝಿಯಾಗಿ ನೇಮಕ ಮಾಡಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಸಮಾರಂಭದ ಉಪಾಧ್ಯಕ್ಷ ಹಾಗೂ ಆಯೋಜಕರಾದ ಮಾಜಿ ಮೇಯರ್ ಕೆ. ಅಶ್ರಫ್ ರವರು ತಿಳಿಸಿದ್ದಾರೆ.
ನೂತನ ಖಾಝಿಯವರ ಸ್ವೀಕಾರ ಸಮಾರಂಭವು ಜುಲೈ 22, 2026ರಂದು ಮಧ್ಯಾಹ್ನ 1.30ಕ್ಕೆ ಮಂಗಳೂರಿನ ಅನ್ಸಾರಿ ರಸ್ತೆಯಲ್ಲಿರುವ ಝೀನತ್ ಭಕ್ ಯತೀಂಖಾನ ಹಾಲ್ನಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
1966ರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಪೂವಾಡ್ನಲ್ಲಿ ಜನಿಸಿದ ಸಯ್ಯದ್ ನಾಸಿರ್ ಅಬ್ದುಲ್ ಹಯ್ ಶಿಹಾಬುದ್ದೀನ್ ಬಾ-ಅಲವಿ ಅವರು ಪಾಣಕ್ಕಾಡ್ ಬಾ-ಅಲವಿ ಕುಟುಂಬದ ಪ್ರಮುಖ ವಾರಸುದಾರರಾಗಿದ್ದು, ಧಾರ್ಮಿಕ ಶಿಕ್ಷಣ, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಸಾಮಾಜಿಕ ನಾಯಕತ್ವದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ.
ಸಾಂಪ್ರದಾಯಿಕ ದರ್ಸ್ ಶಿಕ್ಷಣದ ಮೂಲಕ ಇಸ್ಲಾಮಿಕ್ ಶಾಸ್ತ್ರಗಳಲ್ಲಿ ಆಳವಾದ ಪಾಂಡಿತ್ಯ ಗಳಿಸಿರುವ ಅವರು, 2009ರಿಂದ ಕೋಝಿಕ್ಕೋಡ್ ವಲಿಯ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮಲಪ್ಪುರಂ, ಪಾಲಕ್ಕಾಡ್ ಹಾಗೂ ತ್ರಿಶೂರ್ ಜಿಲ್ಲೆಗಳ ಸುಮಾರು 370ಕ್ಕೂ ಅಧಿಕ ಮಹಲ್ಲಾಗಳ ಖಾಝಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸುನ್ನಿ ಮಹಲ್ಲು ಫೆಡರೇಶನ್ ಮಲಪ್ಪುರಂ ಜಿಲ್ಲಾ ಮಸ್ಲಹತ್ ಸಮಿತಿಯ ಅಧ್ಯಕ್ಷರು, ಎಸ್ವೈಎಸ್ ಕೇರಳ ರಾಜ್ಯ ಸಮಿತಿ ಸದಸ್ಯರು ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತಿರೂರಂಗಾಡಿ ತಾಲೂಕು ಸಮಿತಿಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಸ್ವೀಕಾರ ಸಮಾರಂಭದಲ್ಲಿ ಸೈಯದುಲ್ ಉಮ್ಮ ಸಯ್ಯದ್ ಸ್ವಾದಿಕ್ ಅಲಿ ಶಿಹಾಬ್ ತಂಬಳ್, ಶೈಖುನಾ ಉಸ್ತಾದ್ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಶೈಖುನಾ ಉಸ್ತಾದ್ ಕೊಯ್ಯೋಡ್ ಉಮರ್ ಮುಸ್ಲಿಯಾರ್, ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಬಳ್, ಎಸ್ಕೆಎಸ್ಎಸ್ಎಫ್ ಕೇಂದ್ರ ಅಧ್ಯಕ್ಷ ಸಯ್ಯದ್ ಹಮೀದ್ ಅಲಿ ಶಿಹಾಬ್ ತಂಬಳ್ ಸೇರಿದಂತೆ ಸಮಸ್ತದ ಪ್ರಮುಖ ಉಲಮಾಗಳು, ವಿವಿಧ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಝೀನತ್ ಭಕ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಡಾ. ಹಾಜಿ ಯೆನೆಪೋಯ ಅಬ್ದುಲ್ಲಾ ಕುಂಞ ವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್, ಹಾಜಿ ಅಬ್ಬು ಸಮದ್, ಮೊಹಮ್ಮದ್ ಅಶ್ರಫ್ ಹಳೆಮನೆ, ಮಕ್ಬೂಲ್ ಅಹ್ಮದ್, ಅದ್ದು ಹಾಜಿ, ಐ. ಮೊಯಿದಿನಬ್ಬ ಹಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



