ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತು ಮಹತ್ವದ ಪ್ರಸ್ತಾಪವೊಂದು ಹೊರಬಿದ್ದಿದೆ. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (EAC-PM) ಕಾರ್ಯಪತ್ರದಲ್ಲಿ ರಾಜ್ಯದ 9 ಲೋಕಸಭಾ ಕ್ಷೇತ್ರಗಳನ್ನು ವಿಭಜಿಸುವ ಹಾಗೂ ಒಟ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 28ರಿಂದ 42ಕ್ಕೆ ಹೆಚ್ಚಿಸುವ ಸಾಧ್ಯತೆಯನ್ನು ಪ್ರಸ್ತಾಪಿಸಲಾಗಿದೆ.
ಕಾರ್ಯಪತ್ರದ ಪ್ರಕಾರ ಬೆಳಗಾವಿ, ವಿಜಯಪುರ, ಧಾರವಾಡ, ದಾವಣಗೆರೆ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆಗೆ ಪರಿಗಣಿಸಲಾಗಿದೆ.
ಹಿಂದಿನಂತೆ ಕೇವಲ ಜನಸಂಖ್ಯೆಯನ್ನು ಆಧಾರವಾಗಿಸದೇ, ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ ಸಾಂದ್ರತೆ, ಆಡಳಿತಾತ್ಮಕ ಸುಗಮತೆ ಹಾಗೂ ಮತದಾರರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಗಳ ಮರುವಿಂಗಡಣೆ ಮಾಡುವಂತೆ ಕಾರ್ಯಪತ್ರದಲ್ಲಿ ಶಿಫಾರಸು ಮಾಡಲಾಗಿದೆ.
ದೊಡ್ಡ ಕ್ಷೇತ್ರಗಳಲ್ಲಿ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡುವುದು, ಮತಗಟ್ಟೆಗಳ ನಡುವಿನ ಅಂತರ ತಗ್ಗಿಸುವುದು, ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವುದು ಹಾಗೂ ಮಹಿಳೆಯರಿಗೆ ಹೆಚ್ಚಿನ ಮತಗಟ್ಟೆಗಳ ವ್ಯವಸ್ಥೆ ಕಲ್ಪಿಸುವುದು ಈ ಪ್ರಸ್ತಾಪದ ಪ್ರಮುಖ ಉದ್ದೇಶಗಳಾಗಿವೆ.
ಇದೇ ವೇಳೆ, ಹಲವು ವರ್ಷಗಳಿಂದ ಕೇಳಿಬರುತ್ತಿರುವ ಕೊಡಗುಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡುವ ಬೇಡಿಕೆಯನ್ನೂ ಕಾರ್ಯಪತ್ರ ಉಲ್ಲೇಖಿಸಿದೆ. ಮೈಸೂರು–ಕೊಡಗು ಕ್ಷೇತ್ರವನ್ನು ವಿಭಜಿಸಿ ಕೊಡಗು ಜಿಲ್ಲೆಗೆ ಪ್ರತ್ಯೇಕ ಕ್ಷೇತ್ರ ಕಲ್ಪಿಸುವ ಸಾಧ್ಯತೆಯನ್ನೂ ಪ್ರಸ್ತಾಪಿಸಲಾಗಿದೆ.
ಬೆಂಗಳೂರಿನಲ್ಲಿ ಅತಿಹೆಚ್ಚು ಮತದಾರರಿರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮೂಲಕ ಹೆಚ್ಚುವರಿ ಕ್ಷೇತ್ರಗಳನ್ನು ರಚಿಸುವ ಸಾಧ್ಯತೆಯನ್ನೂ ಕಾರ್ಯಪತ್ರದಲ್ಲಿ ಉಲ್ಲೇಖಿಸಲಾಗಿದೆ.


