ಶಿವಮೊಗ್ಗ : ಹವಾಮಾನ ವೈಪರೀತ್ಯದಿಂದ ಪ್ರಕೃತಿಯಲ್ಲಿ ದೊಡ್ಡ ಮಟ್ಟದ ಏರುಪೇರು ಉಂಟಾಗಿ, ಅಕಾಲಿಕ ಮಳೆ, ಗುಡುಗು-ಸಿಡಿಲಿನ ಆರ್ಭಟ ಹಾಗೂ ಭೂಕಂಪನದಂತಹ ಘಟನೆಗಳು ಸಂಭವಿಸಬಹುದು ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆ ಮತ್ತು ಬೆಳೆ ಆಗುವ ಸಾಧ್ಯತೆ ಇದ್ದರೂ, ಅಕಸ್ಮಿಕ ಪ್ರಕೃತಿ ವಿಕೋಪಗಳಿಂದ ದೊಡ್ಡ ನಗರಗಳು ಸಂಕಷ್ಟ ಎದುರಿಸಬಹುದು ಎಂದು ಹೇಳಿದರು.
ಹಿಂಗಾರು ಮಳೆ, ಗಾಳಿ ಮತ್ತು ಗುಡುಗು-ಸಿಡಿಲಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು, ಜನಜೀವನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಬೆಳವಣಿಗೆಗಳ ಕುರಿತು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಸ್ವಾಮೀಜಿ, “ಅರಸನ ಅರಮನೆ ಕಳೆಗುಂದಿತು, ಪಟ್ಟದ ಆನೆ ಗಾಂಭೀರ್ಯ ನಡೆದುಿತ್ತು” ಎಂದು ಹೇಳುವ ಮೂಲಕ ರಾಜಕೀಯದಲ್ಲಿ ಬದಲಾವಣೆಯ ಸೂಚನೆ ನೀಡಿದರು.
ಈ ವೇಳೆ ಜಡೆ ಸಂಸ್ಥಾನ ಮಠ-ಸೊರಬ ಮುರುಘಾಮಠದ ಡಾ. ಮಹಾಂತ ಮಹಾಸ್ವಾಮೀಜಿ ಮಾತನಾಡಿ, ಜಡೆ ಮಠವು ಗುರುಪರಂಪರೆಯನ್ನು ಉಳಿಸಿಕೊಂಡು ನಾಡಿನಲ್ಲಿ ವಿಶೇಷ ಭಕ್ತ ಸಮೂಹವನ್ನು ಹೊಂದಿದೆ ಎಂದು ಹೇಳಿದರು.


