ಬೆಂಗಳೂರು : ತಮ್ಮನ ಪ್ರೇಮ ಸಂಬಂಧದ ವಿಚಾರಕ್ಕೆ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಶಾಕಿಂಗ್ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರನ ಅಣ್ಣನನ್ನೇ ಅಪಹರಿಸಿ ಕೈಕಾಲು ಕಟ್ಟಿ ಹಲ್ಲೆ ನಡೆಸಿದ ವಿಡಿಯೋ ಇದೀಗ ಆತಂಕ ಸೃಷ್ಟಿಸಿದೆ.
ಬ್ಯಾಡರಹಳ್ಳಿಯ ಶಿವಕುಮಾರ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಈ ಸಂಬಂಧಕ್ಕೆ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಇಬ್ಬರೂ ಮನೆ ಬಿಟ್ಟು ತೆರಳಿದ ಹಿನ್ನೆಲೆ, ಯುವತಿಯ ತಂದೆ ಬಸವರಾಜ್ ಹಾಗೂ ಅವರ ಸಂಬಂಧಿಕರು ಶಿವಕುಮಾರ್ ಸಿಗದ ಕಾರಣ ಆತನ ಅಣ್ಣ ಕೊಟ್ರೇಶ್ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಕೊಟ್ರೇಶ್ ಅವರನ್ನು “ಪೊಲೀಸ್ ಠಾಣೆಗೆ ಹೋಗೋಣ” ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದು ಅಪಹರಿಸಲಾಗಿದೆ. ಬಳಿಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೈಕಾಲು ಕಟ್ಟಿ ಮನಬಂದಂತೆ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಹಲ್ಲೆ ನಡೆಸುವ ವೇಳೆ ಆರೋಪಿಗಳು ವಿಡಿಯೋ ಚಿತ್ರೀಕರಿಸಿದ್ದು, “ಶಿವು ಎಲ್ಲಿದ್ದರೂ ಹುಡುಗಿಯನ್ನು ಕರೆತಂದು ಒಪ್ಪಿಸು” ಎಂದು ಕೊಟ್ರೇಶ್ ಮೂಲಕ ಹೇಳಿಸಿ ಆ ವಿಡಿಯೋವನ್ನು ಕುಟುಂಬಸ್ಥರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಕೊಟ್ರೇಶ್ ಜೀವಭಯದಿಂದ ಅಂಗಲಾಚುತ್ತಿರುವ ದೃಶ್ಯಗಳು ಕಂಡುಬಂದಿವೆ. ಘಟನೆ ಕುರಿತು ಕುಟುಂಬಸ್ಥರು ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿಗಳು ಕೊಟ್ರೇಶ್ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.


