ಮಂಗಳೂರು : ಮಂಗಳೂರಿನ ಅತ್ತಾವರದಲ್ಲಿರುವ ಐತಿಹಾಸಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 19ರಿಂದ 23ರವರೆಗೆ ಭವ್ಯ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಉತ್ಸವದ ಅಂಗವಾಗಿ ಏಪ್ರಿಲ್ 19ರಂದು ಮಂಗಳದೇವಿ ದೇವಸ್ಥಾನದಿಂದ ಹೊರಕಾಣಿಕೆ ಮೆರವಣಿಗೆ ನಡೆಯಲಿದ್ದು, ಅದು ಅತ್ತಾವರದ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ತಲುಪಲಿದೆ. ಐದು ದಿನಗಳ ಕಾಲ ಭಕ್ತಿ ಮತ್ತು ಶ್ರದ್ಧೆಯಿಂದ ವಿವಿಧ ಪೂಜಾ ವಿಧಿಗಳು, ಭಜನಾ ಸಂಕೀರ್ತನೆ ಹಾಗೂ ಧಾರ್ಮಿಕ ಸಭೆಗಳು ನಡೆಯಲಿವೆ.
ಏಪ್ರಿಲ್ 23ರಂದು ಬೆಳಿಗ್ಗೆ 7:30ಕ್ಕೆ ನೂತನ ಗರ್ಭಗೃಹದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಈ ಮಹತ್ವದ ಧಾರ್ಮಿಕ ವಿಧಿಯನ್ನು ಪಂದಳ ರಾಜವಂಶಸ್ಥರಾದ ಶ್ರೀ ನಾರಾಯಣ ವರ್ಮ ತಂಬೂರನ್ ಅವರ ಉಪಸ್ಥಿತಿಯಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ನೆರವೇರಿಸಲಾಗುತ್ತದೆ.
ಉತ್ಸವದ ಅವಧಿಯಲ್ಲಿ ಪ್ರತಿದಿನ ಸಂಜೆ ಧಾರ್ಮಿಕ ಸಭೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಮಕೃಷ್ಣ ಮಠ, ಒಡಿಯೂರು ಗುರುದೇವ ದತ್ತ ಸಂಸ್ಥಾನ ಸೇರಿದಂತೆ ಹಲವು ಮಠಾಧೀಶರು ಆಶೀರ್ವಚನ ನೀಡಲಿದ್ದಾರೆ. ವಿವಿಧ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮಾಜದ ಪ್ರಮುಖರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ಪ್ರದರ್ಶನಗಳು, ಯಕ್ಷಗಾನ ಬಯಲಾಟ, ತುಳು ಹಾಸ್ಯ ನಾಟಕ, ಸಂಗೀತ ರಸಮಂಜರಿ ಹಾಗೂ ಭಕ್ತಿ ಗೀತೆಗಳ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಅಂತಿಮ ದಿನ ನೃತ್ಯರೂಪಕ ‘ಮಣಿಕಂಠ ಜನನ’ ವಿಶೇಷ ಆಕರ್ಷಣೆಯಾಗಿರಲಿದೆ.
ಅಯ್ಯಪ್ಪ ಭಕ್ತ ಅಭಿವೃದ್ಧಿ ಸಮಿತಿಯವರು ಈ ಧಾರ್ಮಿಕ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೈವಾನುಗ್ರಹ ಪಡೆಯುವಂತೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಯ್ಯಪ್ಪ ಸಮಿತಿಯ ಅಧ್ಯಕ್ಷರು ಸೂರಜ್ ರಾಘವನ್,ಬ್ರಹ್ಮ ಕಳಶ ಸಮಿತಿಯ ಕಾರ್ಯಧ್ಯಕ್ಷರಾದ ಮುರಳಿಧರ್,ಕಾರ್ಯಧ್ಯಕ್ಷರಾದ ಗೋಕುಲ್ ದಾಸ್,ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ರಾಜರತ್ನ ಸನೀಲ್,ಗೌರವ ಕಾರ್ಯದರ್ಶಿ ಜನಾರ್ಧನಗ ಅತ್ತಾವರ್,ಸಮಿತಿಯ ಉಪಾಧ್ಯಕ್ಷೆ .ಡಾ.ಮಾಲತಿ ಶೆಟ್ಟಿ ವೇಣೂರು,ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕ್ಷಿತಿ ಮಲ್ಮೂರು ರವರು ಉಪಸ್ಥಿತರಿದ್ದರು.


