ಬೆಂಗಳೂರು ; ಧರ್ಮಸ್ಥಳದಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿ ಮುಚ್ಚಿಹಾಕಲಾಗಿದೆ ಎಂದು ಒಂದು ಗುಂಪಿನ ಆರೋಪವಾಗಿದ್ದರೆ, ಎಲ್ಲಾ ಸುಳ್ಳು ಧರ್ಮಸ್ಥಳ ದೇವಸ್ಥಾನದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಧರ್ಮಸ್ಥಳವನ್ನು ಸರ್ಕಾರದ ತೆಕ್ಕೆಗೆ ಕೊಡುವ ಹುನ್ನಾರ ನಡೆದಿದೆ ಎಂದು ಮತ್ತೊಂದು ಗುಂಪು ಆರೋಪಿಸಿದೆ. ಇದರ ಮಧ್ಯ ಅನಾಮಿಕ ತೋರಿಸಿದ ಸ್ಥಳಗಳಲ್ಲಿ ಎಸ್ಐಟಿ ಶೋಧ ಕಾರ್ಯ ನಡೆಸಿದೆ. ಆದ್ರೆ, ಇದುವರೆಗೂ ಏನೇನು ಪತ್ತೆಯಾಯ್ತು? ತನಿಖೆ ಯಾವ ಹಂತದಲ್ಲಿ ಎನ್ನುವ ಜನರಲ್ಲಿ ಪ್ರಶ್ನೆಗಳು ಉದ್ಭವಿಸಿದ್ದು, ಈ ಸಂಬಂಧ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆಯ ಕುರಿತ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು ಎಂದು ವಿಪಕ್ಷ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸದನದಲ್ಲಿ ಇಂದು (ಆಗಸ್ಟ್ 18) ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಧರ್ಮಸ್ಖಳ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಶೋಧ ಕಾರ್ಯ ನಡೆದಿರುವ ಕಡೆ ಸಿಕ್ಕಿರುವ ಅಸ್ಥಿಪಂಜರ, ಮೂಳೆಗಳು ಸೇರಿ ಇತರ ವಸ್ತುಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ಎಫ್ಎಸ್ಎಲ್ನಿಂದ ವರದಿ ಬರವರೆಗೆ ತಾತ್ಕಾಲಿಕವಾಗಿ ಶೋಧಕಾರ್ಯ ಸ್ಥಗಿತ ಮಾಡಲು ಎಸ್ಐಟಿ ನಿರ್ಧಾರ ಮಾಡಿದೆ. ವರದಿ ಬಂದ ಬಳಿಕ ತನಿಖೆ ಮುಂದುವರಿಯುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಮಾಸ್ಕ್ ಮ್ಯಾನ್ ಹೇಳಿದಂತೆ ಎಸ್ಐಟಿ ತನಿಖೆ ನಡೆಸಿದ್ದಾರೆ. ಇನ್ನು ಶವ ಹೂತಿರುವ ಸ್ಥಳಗಳಲ್ಲಿ ಅಗೆದು ಅಗೆದು ನೋಡಿದ್ದಾರೆ. ಸುಮಾರು ಹತ್ತಾರು ಸ್ಥಳಗಳಲ್ಲಿ ಅಗೆದು ಉತ್ಖನನ ನಡೆಸಿದ್ದು, ಈ ವೇಳೆ ಎರಡು ಜಾಗದಲ್ಲಿ ಅಸ್ಥಿಪಂಜರ, ಮಾನವನ ಮೂಳೆಗಳು ಪತ್ತೆಯಾಗಿವೆ. ಇನ್ನು ಈ ಸಂಬಂಧ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸದನದಲ್ಲಿ ಉತ್ತರ ನೀಡಿದ್ದು,ಇನ್ನೂ ತನಿಖೆ ಆರಂಭವಾಗಿಲ್ಲ, ಅನಾಲಿಸಿಸ್ ಬಂದ ಮೇಲೆ ತನಿಖೆ ಶುರುವಾಗುತ್ತೆ. ಇನ್ನು ಅಪರಿಚಿತ ಧರ್ಮಸ್ಥಳದ ಎಲ್ಲಾ ಕಡೆ ತೋರಿಸಿದರೆ ಅಗೆಯುವುದಿಲ್ಲ.ಉತ್ಖನನ ಸ್ಥಗಿತಗೊಳಿಸುವ ಬಗ್ಗೆ ಎಸ್ಐಟಿಯವರೇ ನಿರ್ಧರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ಖನನಕ್ಕೂ ಮುನ್ನ ಅಪರಿಚಿತನಿಂದ ಎಸ್ಐಟಿ ಹೇಳಿಕೆ ಪಡೆದಿತ್ತು. ಅಪರಿಚಿತನಿಂದ ಹೇಳಿಕೆ ಪಡೆದ ಬಳಿಕ ಮ್ಯಾಪಿಂಗ್ ಮಾಡಲಾಗಿದ್ದು, ಉತ್ಖನನ ನಡೆಸಿದ ಪೈಕಿ 2 ಜಾಗದಲ್ಲಿ ಅಸ್ಥಿಪಂಜರ, ಮೂಳೆ, ಬುರುಡೆ ಪತ್ತೆಯಾಗಿದೆ. ಒಂದು ಜಾಗದಲ್ಲಿ ಅಸ್ಥಿಪಂಜರ ಸಿಕ್ಕರೆ, ಮತ್ತೊಂದು ಜಾಗದಲ್ಲಿ ಮೂಳೆ, ಬುರುಡೆ ಪತ್ತೆಯಾಗಿದ್ದು, ಅವುಗಳನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಹೀಗಾಗಿ ತನಿಖೆ ಇನ್ನೂ ಆರಂಭವಾಗಿಲ್ಲ. ಎಫ್ಎಸ್ಎಲ್ ವರದಿ ಬಂದ ಬಳಿಕ ಅಧಿಕರತವಾಗಿ ತನಿಖೆ ಆರಂಭವಾಗುತ್ತೆ. ಆದ್ರೆ, ಅಪರಿಚಿತ ಧರ್ಮಸ್ಥಳದ ಎಲ್ಲಾ ಕಡೆ ತೋರಿಸಿದರೆ ಅಗೆಯುವುದಿಲ್ಲ.ಉತ್ಖನನ ಸ್ಥಗಿತಗೊಳಿಸುವ ಬಗ್ಗೆ ಎಸ್ಐಟಿಯವರೇ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಈವರೆಗೆ ಅಸ್ತಿಪಂಜರ ಸಿಕ್ಕಿದ ಜಾಗಗಳ ಹಾಗೂ ಮೂಳೆಗಳ ಬಗ್ಗೆ ವಿಶ್ಲೇಷಣೆ ಆಗಬೇಕಿದೆ. ಈವರೆಗೆ ತನಿಖೆಯೇ ಆರಂಭ ಆಗಿಲ್ಲ. ಇದೆಲ್ಲವೂ ತನಿಖೆಯ ಪೂರ್ವ ಭಾಗವಾಗಿದೆ. ಅಸ್ತಿಪಂಜರದ ವರದಿಗಳು, ಮಣ್ಣಿನ ಪರೀಕ್ಷಾ ವರದಿಗಳು ಹಾಗೂ ವಿಶ್ಲೇಷಣಾ ವರದಿಗಳು ಬಂದ ನಂತರವೇ ಅಸಲಿ ತನಿಖೆ ಆರಂಭ ಆಗಲಿದೆ. ಇನ್ನು ಮುಂದೆ ತನಿಖೆ ತುಂಬಾ ಗಂಭೀರವಾಗಿ ನಡೆಯುತ್ತದೆ. ಪಾರದರ್ಶಕವಾಗಿ, ಯಾರದೇ ಒತ್ತಡಕ್ಕೆ ಮಣಿಯದ ರೀತಿಯಲ್ಲಿ ತನಿಖೆಯ ದಿಕ್ಕನ್ನು ತಪ್ಪಿಸಲು ಅವಕಾಶ ಇಲ್ಲದ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ದೂರುದಾರ ವ್ಯಕ್ತಿ ತೋರಿಸಿದ ಕಡೆಗಳಲ್ಲಿ ಅಗಿಯಲಾಗುತ್ತದೆ. ಅವನು ಇಡೀ ಧರ್ಮಸ್ಥಳವನ್ನು ಅಗೆಯಲು ಹೇಳಿದರೆ ಅದನ್ನು ಮಾಡುವುದಿಲ್ಲ. ಆದರೆ, ಕೆಲವೊಂದು ಜಾಗಗಳಲ್ಲಿ ತೀರಾ ಅನುಮಾನ ಇದ್ದಲ್ಲಿ ಅಗೆದು ಶೋಧ ಮಾಡಲಾಗುತ್ತದೆ ಎಂದರು.