ಮೈಸೂರು : ಮೈಸೂರಿನ ಕೆಆರ್ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವುದರ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ರಾಜ್ಯಕ್ಕೂ ಬಹಳ ಕೊಡುಗೆ ನೀಡಿದ್ದಾರೆ. ಕರ್ನಾಟಕಕ್ಕೆ ಅವರ ಹೆಸರನ್ನು ಇಟ್ಟುಕೊಳ್ಳಲಿ ಇಲ್ಲವೇ ದೇವನೂರು ಬಡಾವಣೆಗೆ, ಕೆಸರೆ ಗ್ರಾಮಕ್ಕೆ ಅವರ ಹೆಸರು ಇಟ್ಟುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಕೆಆರ್ಎಸ್ ರಸ್ತೆಯ ಹೆಸರನ್ನು ಬದಲಿಸಿ ತಮ್ಮ ಹೆಸರನ್ನು ಇಟ್ಟುಕೊಳ್ಳಲು ಸಿದ್ದರಾಮಯ್ಯ ತಮ್ಮ ಚೇಲಾಗಳನ್ನು ಛೂ ಬಿಟ್ಟಿದ್ದಾರೆ. ಹೆಸರು ಬದಲಾಯಿಸುವ ಮೂಲಕ ಮೈಸೂರು ಮಹಾರಾಜರಿಗೆ ಅಪಮಾನ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಕೆಆರ್ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂಬ ಹೆಸರಿದೆ. ಇಷ್ಟಾದರೂ ಹೆಸರು ಬದಲಾವಣೆ ವಿಚಾರ ವಿವಾದವಾದರೂ ಮುಖ್ಯಮಂತ್ರಿಗಳು ಜಾಣಮೌನ ವಹಿಸಿದ್ದಾರೆ ಎಂದು ಹರಿಹಾಯ್ದರು. ಮೈಸೂರು ನಗರಕ್ಕೆ ನನ್ನದೂ ಕೊಡುಗೆ ಇದೆ. ಹಾಗೆಂದು ನನ್ನ ಹೆಸರಿಡಿ ಎಂದು ಹೇಳಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ರಾಜಮನೆತನದ ಹೆಸರು ತೆಗೆದು ಮುಖ್ಯಮಂತ್ರಿಗಳ ಹೆಸರಿಡುವ ಅಗತ್ಯವೇನಿದೆ. ಸಿದ್ದರಾಮಯ್ಯರವರ ಹೆಸರನ್ನು ಬೇಕಾದರೆ ಮುಡಾದ ಕೆಸರೆ ಗ್ರಾಮಕ್ಕೆ ಇಡಲಿ ಎಂದು ಲೇವಡಿ ಮಾಡಿದರು.


