ಮಂಗಳೂರು : ಹೆಬ್ಬಾವಿನ ಮರಿ ಎಂದು ವಿಷದ ಕನ್ನಡಿ ಹಾವಿನ ಮರಿಯನ್ನ ಬರಿಗೈಯಲ್ಲಿ ಹಿಡಿದ ವ್ಯಕ್ತಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಮರವೂರು ಎಂಬಲ್ಲಿ ನಡೆದಿದೆ.
ಮೃತರನ್ನು ಬಜ್ಪೆಯ ರಾಮಚಂದ್ರ ಪೂಜಾರಿ (55) ಎಂದು ಗುರುತಿಸಲಾಗಿದೆ.
ಮೃತ ರಾಮಚಂದ್ರ ಪೂಜಾರಿ ಮರವೂರಿನ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು. ಸೆ.4 ರ ಮಧ್ಯಾಹ್ನ ಮನೆಯ ಮೆಟ್ಟಿಲು ಸಮೀಪ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ವಿಷಪೂರಿತ ಕನ್ನಡಿ ಹಾವಿನ ಮರಿಯನ್ನು ಹೆಬ್ಬಾವಿನ ಮರಿ ಎಂದು ಭಾವಿಸಿ ಬರಿಗೈಯಲ್ಲಿ ರಾಮಚಂದ್ರ ಪೂಜಾರಿ ಹಿಡಿದಿದ್ದಾರೆ.ಹಾವಿನ ಮರಿ ಕೈಗೆ ಕಚ್ಚಿದ್ದರೂ ಅದು ಹೆಬ್ಬಾವಿನ ಮರಿ ಎಂದು ನಿರ್ಲಕ್ಷಿಸಿದ್ದರು. ಬಳಿಕ ರಾಮಚಂದ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಆಸ್ಪತ್ರೆ ದಾಖಲು ಮಾಡಲಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


