ಕೋಲಾರ: ಹೊರವಲಯದ ಸಹಕಾರ ನಗರದ ಬಳಿ ಆಡಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಕಾರ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಹಾಗೂ ಬಂಗಾರಪೇಟೆಯ ನಿಶ್ಚಲ್ ಎಂದು ಗುರುತಿಸಲಾಗಿದೆ. ಮೃತರು ಪ್ರಸಿದ್ಧ ಯೂನಿವರ್ಸಿಟಿವೊಂದರ ವಿದ್ಯಾರ್ಥಿಗಳು. ಬಂಗಾರಪೇಟೆಯ ಸಾಯಿ ಗಗನ್ ಘಟನೆಯಲ್ಲಿ ಪಾರಾಗಿದ್ದಾನೆ. ವಿದ್ಯಾರ್ಥಿಗಳು ಸಾಯಿ ಗಗನ್ ಮನೆಗೆ ಬಂದಿದ್ದರು. ಅಲ್ಲಿಂದ ವಾಪಸ್ ಕೋಲಾರಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
ಮೃತಪಟ್ಟ ಮೂವರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾಯಿಗಗನ್ ಸೋದರಿ ಮದುವೆ ಆಮಂತ್ರಣ ಹಂಚಲು ಸ್ನೇಹಿತರೆಲ್ಲ ಕಾರಿನಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


