ಬಾಗಲಕೋಟೆ : ಪ್ರೀತಿಸಿ ಮಾಡುವೆ ಆದ ದಂಪತಿಗೆ ಪೊಲೀಸರಿಂದ ಬೆದರಿಕೆ ನಡೆದ ಘಟನೆ ನಡೆದಿದೆ. ಬಾದಾಮಿ ಮೂಲದ ಅನ್ಯಕೋಮಿನ ಯುವತಿ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಬಳಿಕ ರಕ್ಷಣೆ ಕೋರಿ ನವದಂಪತಿ ಬಾಗಲಕೋಟೆ ಎಸ್ಪಿ ಕಚೇರಿಗೆ ಬಂದಿದ್ದರು. ಪೊಲೀಸರ ರಕ್ಷಣೆ ಬಯಸಿ ಠಾಣೆಗೆ ಬಂದವರ ಮೇಲೆ ಅವಾಚ್ಯ ಪದ ಬಳಸಿದ ಸಿಪಿಐ ನಡತೆಯಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸಿಪಿಐ ಅವರಿಗೆ ರಕ್ಷಣೆ ಕೊಡಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಬಾದಾಮಿ ಮೂಲದ ರುಬಿನಾ ಹಾಗೂ ಮಹಾಂತೇಶ್ ಎಂಬಿಬ್ಬರು ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದು ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪ್ರೇಮಿಗಳ ಪ್ರಕರಣದ ವಿಚಾರವಾಗಿ ಹಿಂದೂ ಕಾರ್ಯಕರ್ತರನ್ನು ಸಿಪಿಐ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೇ ಪೊಲೀಸರು ಅನ್ಯ ಸಮುದಾಯದ ಪರ ಇದ್ದಾರೆ ಎಂದು ಆರೋಪಿಸಿ ಬಾಗಲಕೋಟೆಯ ನವನಗರ ಠಾಣೆ ಸಿಪಿಐ ರಾಮಣ್ಣ ಬಿರಾದಾರ ವಿರುದ್ಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಈ ಹಿನ್ನೆಲೆ ಹಿಂದೂ ಸಂಘಟನೆಗಳ ಮನೋಜ್, ಕುಮಾರಸ್ವಾಮಿ ಮತ್ತು ವಿಕ್ರಮ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಭೇಟಿ ನೀಡಿದ್ದಾರೆ. ಎಸ್ಪಿ ಜೊತೆ ಚರಂತಿಮಠ ಮಾತುಕತೆ ನಡೆಸಿದ್ದು, ಸಿಪಿಐ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಎಸ್ಪಿ ಅಮರನಾಥ್ ರೆಡ್ಡಿ ಒಪ್ಪಿದ್ದಾರೆ. ಈ ಕುರಿತು ವೀರಣ್ಣ ಚರಂತಿಮಠ ಇಂದು ಹಿಂದೂ ಪರ ಸಂಘಟನೆಗಳ ಸಭೆ ಕರೆದಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾದ ಹಿನ್ನಲೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.


