ಬೆಂಗಳೂರು : ಮಂಡ್ಯ ಸಂಸದೆ ಸುಮಲತಾ ಅವರು ಮುಂದಿನ ರಾಜಕೀಯ ನಡೆ ಕುತೂಹಲ ಕೆರಳಿಸಿದ್ದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ
ಮೂಲಕ ಎರಡನೇ ಬಾರಿಗೆ ಸಂಸತ್ ಪ್ರವೇಶಿಸುವ ಸುಮಲತಾ ಅವರ ಕನಸು ಇದೀಗ ಕ್ಷೇತ್ರ ಜೆಡಿಎಸ್ ಪಾಲಾಗುವ ಮೂಲಕ ನುಚ್ಚುನೂರಾಗಿದೆ.
ರಾಜಕಾರಣ ಮಾಡಿದರೆ ಮಂಡ್ಯದಲ್ಲೇ ಎಂದು ಘೋಷಿಸಿದ್ದ ಸುಮಲತಾ ಅವರ ಮುಂದಿನ ರಾಜಕೀಯ ನಡೆಯ ಬಗೆಗಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಬುಧವಾರ ಸಂಜೆ ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ಸುಮಲತಾ ಅವರು ಆಪ್ತರು-ಬೆಂಬಲಿಗರ ಸಭೆ ನಡೆಸಿ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವರೆಂದು ಹೇಳಲಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಬುಧವಾರದ ಸಭೆ ರದ್ದಾಯಿತು. ಬಲ್ಲ ಮೂಲಗಳ ಪ್ರಕಾರ ಗುರುವಾರ ಮಧ್ಯಾಹ್ನ ಸುಮಲತಾ ಅವರು ಬೆಂಬಲಿಗರೊAದಿಗೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಎಲ್ಲರ ಸಲಹೆ-ಅಭಿಪ್ರಾಯಗಳನ್ನು ಪಡೆಯಲಿರುವ ಸುಮಲತಾ ಅವರು ದೃಢನಿರ್ಧಾರವೊಂದನ್ನು ಕೈಗೊಳ್ಳಲಿದ್ದು ಮಂಡ್ಯಕ್ಕೆ ತೆರಳಿ ಸಂಜೆಯ ಹೊತ್ತಿಗೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ರಾಜಕೀಯ ತೀರ್ಮಾನವನ್ನು ಪ್ರಕಟಿಸುವರೆಂದು ಹೇಳಲಾಗಿದೆ.


