ಮಂಗಳೂರು : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು ತರಕಾರಿಗಳ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
ಮದುವೆ ಇನ್ನಿತರ ಸಮಾರಂಭಗಳ ಸೀಸನ್, ಬೀನ್ಸ್, ಬೆಂಡೆಕಾಯಿ, ಟೊಮೆಟೋ, ನಿಂಬೆ ಸೇರಿದಂತೆ ಇತರ ತರಕಾರಿಗಳ ದರ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹೆಚ್ಚಾಗುತ್ತಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿರುವುದು ವರದಿಯಾಗಿದೆ.ಇತ್ತೀಚೆಗೆ ದಿಢೀರ್ ಏರಿಕೆ ಕಂಡಿದ್ದ ಬೆಳ್ಳುಳ್ಳಿ ಬೆಲೆ ಇದೀಗ ಕೆಜಿಗೆ 200 ರೂ.ಗೆ ಇಳಿಕೆಯಾಗಿದೆ. ಮತ್ತೊಂದೆಡೆ, ಇತ್ತೀಚಿನ ದಿನಗಳಲ್ಲಿ ನಿಂಬೆ ಹಣ್ಣಿನ ಬೆಲೆಯೂ ಏರಿಕೆಯಾಗಿದ್ದು, ಮಧ್ಯಮ ಗಾತ್ರದ ನಿಂಬೆ ಹಣ್ಣಿಗೆ ಏಳರಿಂದ ಎಂಟು ರೂ.ವರೆಗೆ ಮಾರಾಟವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಆರರಿಂದ ಏಳು ರೂಪಾಯಿಗೆ ಮಾರಾಟವಾಗುತ್ತಿದೆ.
ಸೀಬೆಕಾಯಿ ಕೆಜಿಗೆ 60 ರಿಂದ 70 ರೂ. ಹೀರೇಕಾಯಿ ಕೆಜಿಗೆ 40 ರೂ., ಬೆಂಡೆಕಾಯಿ 80 ರೂ., ಹಸಿರು ಬದನೆ 80 ರೂ.ಆಗಿದೆ ಶುಂಠಿ ಬೆಲೆ ಈಗ ಕೆಜಿಗೆ 160 ರಿಂದ 200 ರೂ.ವರೆಗೆ ಇದೆ. ಈರುಳ್ಳಿ ಕೆಜಿಗೆ 30 ರೂ.ಗೆ ಮಾರಾಟವಾಗುತ್ತಿದೆ. ಟೊಮೆಟೊ ಕೆಜಿಗೆ 25 ರೂ., ಮಾರಾಟವಾಗುತ್ತಿದೆ.ಈ ಹಿಂದೆ ಸ್ಥಳೀಯ ಮಾರುಕಟ್ಟೆಯಲ್ಲಿ ಕೆಜಿಗೆ 50 ರಿಂದ 60 ರೂ.ವರೆಗೆ ಇದ್ದ ಬೀನ್ಸ್ ಬೆಲೆ ಈಗ ಗಗನಕ್ಕೇರಿದ್ದು, ಕೆಜಿಗೆ 100 ರೂ. ದಾಟಿದೆ.
ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗೆ ತರಕಾರಿಗಳು ಅತಿಯಾಗಿ ಚಿಕ್ಕಮಗಳೂರು,ಹಾಸನ,ಬೆಂಗಳೂರು ಹೊರವಲಯದಿಂದ ಬರುತ್ತಿದ್ದು ನೀರಿನ ಸಮಸ್ಯೆಯಿಂದ ಇಳುವರಿ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಕರಾವಳಿ ಪ್ರದೇಶಕ್ಕೆ ಪ್ರಮುಖವಾಗಿ ಬೆಂಗಳೂರು ಹೊರವಲಯ ಮತ್ತು ಚಿಕ್ಕಮಗಳೂರಿನ ಮಾರುಕಟ್ಟೆಗಳಿಂದ ಬೀನ್ಸ್ ರವಾನೆಯಾಗುತ್ತಿದೆ. ಆದರೆ, ಬೆಂಗಳೂರಿನ ಹೊರವಲಯದಲ್ಲಿ ನೀರಿನ ಕೊರತೆಯಿಂದ ಕರಾವಳಿ ಪ್ರದೇಶಗಳಲ್ಲಿಯೂ ನೀರಿನ ಪರಿಸ್ಥಿತಿ ಹದಗೆಟ್ಟಿದ್ದು, ತರಕಾರಿ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಹೀಗಾಗಿ ನಿವಾಸಿಗಳು ದೂರದ ಜಿಲ್ಲೆಗಳ ತರಕಾರಿಗಳನ್ನು ಅವಲಂಬಿಸಬೇಕಾಗಿದೆ.ಮಳೆ ಕೊರತೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಪರಿಣಾಮವಾಗಿ ತರಕಾರಿ ಕೃಷಿಗೂ ಹೊಡೆತ ಬಿದ್ದಿದೆ.
ಉಭಯ ಜಿಲ್ಲೆಗಳಿಗೆ ಅಗತ್ಯ ಇರುವ ಅಷ್ಟೂ ತರಕಾರಿಗಳನ್ನು ಹೊರಗಡೆಯಿಂದ ತರಿಸಿಕೊಳ್ಳುವಂತಾಗಿದೆ. ತರಕಾರಿ ದುಬಾರಿಯಾಗಿರುವುದರಿಂದ ಹೋಟೆಲ್ ಮಾಲೀಕರ ನಿದ್ದೆ ಕೆಡಿಸಿದಂತಾಗಿದೆ.ತರಕಾರಿ ಬೆಲೆ ಏರಿಕೆಯಾದರೆ ಮೀನಿನ ದರವು ಏರಿಕೆಯಾಗುವ ಸಂಭವ ಹೆಚ್ಚಾಗಿದೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.


