ಮಂಗಳೂರು : ಬಿಲ್ಲವ ಸಮುದಾಯದ ಮತಕ್ಕಾಗಿ ಸ್ಕೆಚ್ ಹಾಕಿದ ಕಾಂಗ್ರೆಸ್ ಹೈ-ಕಮಾಂಡ್ ಈ ಬಾರಿ ಬಿಜೆಪಿ ಯನ್ನು ಮಣಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಇದೀಗ ಚೌಟಗೆ ಸವಾಲೆಸೆಯಲು ಪ್ರಬಲ ಎದುರಾಳಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.
ಕಳೆದ ಬಾರಿ 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಬಂಟ್ ಸಮುದಾಯದ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತು.ಮಿಥುನ್ ರೈ ಸೋಲನ್ನು ಅನುಭವಿಸಿದರು. ಆದರೆ ಈ ಬಾರಿ ಬಿಜೆಪಿ ಕೂಡ ಬಂಟ ಸಮುದಾಯದ ಅಭ್ಯರ್ಥಿಯನ್ನು ಘೋಷಿಸಿದೆ.ಆದರೆ ಜಿಲ್ಲೆಯ ಅತಿ ದೊಡ್ಡ ಸಮುದಾಯವಾದ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ಪಲ್ಲಟಕ್ಕೆ ಮುಂದಾಗಿರುವುದು ಕಂಡುಬಂದಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಸಂಸದ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿರುವ ವಿನಯ್ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಸುಧಾಕರ್ ಅವರಂತಹ ಅನುಭವಿ ಅಭ್ಯರ್ಥಿಗಳು ಕಣದಲ್ಲಿದ್ದು ಕಾಂಗ್ರೆಸ್ ಪಕ್ಷ ಇದೀಗ ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಅವರ ಆಪ್ತರಾಗಿರುವ ಪದ್ಮರಾಜ್ ರಾಮಯ್ಯ ಅವರಿಗೆ ಪಕ್ಷದ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಿಧಾನ ಸಭೆ ಚುನಾವಣೆಗೆ ಪದ್ಮರಾಜ್ ಅವರ ಹೆಸರು ಮುಂಚಿಂಯಲ್ಲಿತ್ತು ಆದರೆ ಅಂತಿಮವಾಗಿ ಮಾಜಿ ಶಾಸಕ ಜೆ ಆರ್ ಲೋಬೋ ರವರಿಗೆ ಟಿಕೆಟ್ ಲಭ್ಯವಾಗಿ ಸೋಲನ್ನನುಭವಿಸಿದರು . ಜಿಲ್ಲೆಯಲ್ಲಿ ಬಿಜೆಪಿ ಗೆ ಪೈಪೋಟಿ ನೀಡುವ ಅಭ್ಯರ್ಥಿಯನ್ನು ಹುಡುಕುವ ಭರಾಟೆಯಲ್ಲಿ ಬಿಲ್ಲವ ಸಮುದಾಯದ ಪದ್ಮರಾಜ್ ಅವರೇ ಮುಂಚೂಣಿಯಲ್ಲಿದ್ದಾರೆ ಎಂಬ ಸೂಚನೆಗಳು ವ್ಯಕ್ತವಾಗಿದ್ದು ಪಕ್ಷದ ಹೈಕಮಾಂಡ್ ಕೂಡ ಅವರ ಉಮೇದುವಾರಿಕೆಗೆ ಒಲವು ತೋರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸರಕಾರ ಹಲವು ವರ್ಷಗಳ ನಂತರ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಅಭ್ಯರ್ಥಿಗೆ ಮಣೆಹಾಕಿದ್ದು ಟಿಕೆಟ್ ನೀಡುವ ಭರದಲ್ಲಿದೆ. ಹಿಂದುತ್ವ ಭದ್ರಕೋಟೆಯಲ್ಲಿ ಕಾಂಗ್ರೆಸ್ ಲಜ್ಜೆಹಾಕಲು ಹರಸಾಹಸ ಪಡುತ್ತಿದ್ದು ರಾಮಮಂದಿರ ದ ಹೆಸರಲ್ಲಿ ಮತಯಾಚನೆ ಮಾಡುವ ಬಿಜೆಪಿ ಗೆ ದೊಡ್ಡ ಸವಾಲು ಇಲ್ಲದಂತಾಗಿದೆ .ಬಿಲ್ಲವ ಸಮುದಾಯದ ಯುವಕರು ಬಿಜೆಪಿ ಪರ ಇದ್ದು ಈ ಬಾರಿ ಯಾರಿಗೆ ಒಲವು ತೋರುತ್ತಾರೆಂಬುದನ್ನು ಕಾದುನೋಡಬೇಕಾಗಿದೆ.


