ಮೈಸೂರು : ಗ್ರಾಮಸ್ಥರ ಕುಂದುಕೊರತೆ ಆಲಿಸಲು ಆಗಮಿಸಿದ್ದ ಮಾಜಿ ಶಾಸಕ ಹಾಗೂ ಸಿಎಂ ಪುತ್ರರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಘೇರಾವ್ ಮಾಡಿ, ಗ್ರಾಮ ಪ್ರವೇಶಿಸದಂತೆ ತಡೆದ ಘಟನೆ ವರುಣ ಕ್ಷೇತ್ರದ ಮುದ್ದುಬೀರನಹುಂಡಿ ಗ್ರಾಮದಲ್ಲಿ ನಡೆದಿದೆ.
ಯತೀಂದ್ರ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಲ್ಲಿನ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಜನತೆಯಿಂದ ಅಹವಾಲು ಸ್ವೀಕರಿಸುವ ಕರ್ಯಕ್ರಮ ಹಮ್ಮಿಕೊಂಡು ಹಲವೆಡೆ ಪ್ರವಾಸ ಮುಗಿಸಿ ಮುದ್ದುಬೀರನಹುಂಡಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ವಿವಿಧ ಕಾರಣ ನೀಡಿದ ಕೆಲ ಗ್ರಾಮಸ್ಥರು ಕುಂದುಕೊರತೆ ಸಭೆಯಲ್ಲಿ ಮಾಜಿ ಶಾಸಕ ಪಾಲ್ಗೊಳ್ಳದಂತೆ ಅಡ್ಡಿಯುಂಟು ಮಾಡಿದರು.
ಈ ವೇಳೆ ಮಹಿಳೆಯರು ಸಹಾ ಮಾಜಿ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಬೆಂಬಲಿಗರು ಹಾಗೂ ವಿರೋಧಿಸುವವರ ನಡುವೆ ನೂಕಾಟ, ತಳ್ಳಾಟಗಳು ನಡೆದಿದ್ದು, ಗೊಂದಲದ ವಾತಾವರಣ ಸೃಷ್ಟಿಯಾದ ಕಾರಣ ಯತೀಂದ್ರ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಬರಿಗೈಯ್ಯಲ್ಲಿ ವಾಪಸಾದರು.
ರಸ್ತೆ, ಚರಂಡಿ, ನೀರು ಮತ್ತು ಇನ್ನಿತರ ಕೆಲ ಸಮಸ್ಯೆಗಳಿಗೆ ಸಂಬಂಧಿಸಿ ನಮಗೆ ಸ್ಪಂದಿಸಿಲ್ಲ ಎನ್ನುವುದು ಕೆಲವರ ಆರೋಪವಾಗಿದೆ. ಆದರೆ ಇವೆಲ್ಲವೂ ಸುಳ್ಳು, ಕೇವಲ ಗೊಂದಲ ಮೂಡಿಸಲು ಈ ಕೃತ್ಯ ನಡೆಸಲಾಗಿದೆ ಎಂದು ಮಾಜಿ ಶಾಸಕರ ಬೆಂಬಲಿಗರು ಹೇಳಿದ್ದಾರೆ.


