ಬೆಂಗಳೂರು : ರಾಜ್ಯದಲ್ಲಿ ಜಲ ಸಮಸ್ಯೆಯೊಂದಿಗೆ ವಿದ್ಯುತ್ ಅಭಾವ ಎದುರಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ರಾಜ್ಯದ ವಿದ್ಯುತ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಎರಡು ತಿಂಗಳ ಹಿಂದೆ 2 ಸಾವಿರ ಮೆಗಾವ್ಯಾಟ್ ಕೊರತೆ ಉಂಟಾಗಿತ್ತು. ಆಗ ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ಕೊಡು-ಕೊಡುಗೆ (ಬಾರ್ಟರ್) ಸೂತ್ರದ ಮೇಲೆ ಹೆಚ್ಚುವರಿ ವಿದ್ಯುತ್ ಪಡೆಯಲು ಸಾಧ್ಯವಾಯಿತು. ಈಗ ಮತ್ತೆ 1 ಸಾವಿರ ಮೆಗಾವ್ಯಾಟ್ ಹೆಚ್ಚುವರಿಯಾಗಿ ಬೇಕು. ಆದರೆ ಹೆಚ್ಚುವರಿ ವಿದ್ಯುತ್ ಲಭ್ಯವಿಲ್ಲ. ಪ್ರತಿ ಯೂನಿಟ್ಗೆ 10.3೦ ರಿಂದ 13 ರೂ ವರೆಗೆ ಎಲ್ಲ ಕಡೆ ವಿದ್ಯುತ್ ಮಾರಾಟ ನಡೆಯುತ್ತಿದೆ. ಇಷ್ಟು ದುಬಾರಿ ದರದಲ್ಲಿ ವಿದ್ಯುತ್ ಖರೀದಿ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ.
ಜಿಂದಾಲ್ ವಿದ್ಯುತ್ ಕೇಂದ್ರದವರಿಗೆ ನೀರಿಲ್ಲದ ಕಾರಣ ವಿದ್ಯುತ್ ಉತ್ಪಾದನೆ ನಿಲ್ಲಿಸಿದ್ದಾರೆ. ತುಂಗಭದ್ರದಿAದ 1 ಟಿಎಂಸಿ ನೀರು ನೀಡಿದರೆ 500 ಮೆಗಾವ್ಯಾಟ್ ಲಭಿಸಲಿದೆ. ಆದರೂ ಇನ್ನೂ500 ಮೆಗಾವ್ಯಾಟ್ ಕೊರತೆ ಮುಂದುವರಿಯಲಿದೆ. ಈಗ ಉಳಿದಿರುವುದು ಒಂದೇ ದಾರಿ ಕೃಷಿಗೆ ನೀಡುತ್ತಿರುವ ವಿದ್ಯುತ್ತನ್ನು ತಾತ್ಕಾಲಿಕವಾಗಿ ಕಡಿತಗೊಳಿಸುವುದು. ಅಷ್ಟರಲ್ಲಿ ಮಳೆರಾಯನ ಆಗಮನವಾದರೆ ಸಮಸ್ಯೆಗೆ ಸುಲಭ ಪರಿಹಾರ ಸಿಗುತ್ತದೆ. ಕುಡಿಯುವ ನೀರು ಸರಬರಾಜಿಗೂ ವಿದ್ಯುತ್ ಬೇಕೇ ಬೇಕು. ಅದಕ್ಕೆ ಲೋಡ್ಶೆಡ್ಡಿಂಗ್ ಅನ್ವಯಿಸಲು
ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲ ಕಡೆ ಬೇಡಿಕೆ ಅಧಿಕ: ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆ ಅಧಿಕಗೊಂಡಿದೆ. ಆಂಧ್ರ 239.2 ತೆಲಂಗಾಣ 297.3 ಕರ್ನಾಟಕ 325.7, ಕೇರಳ 98.2, ತಮಿಳುನಾಡು 388.7 ಮತ್ತು ಪಾಂಡಿಚೇರಿ 9.6 ದಶಲಕ್ಷ ಯೂನಿಟ್ ಬೇಡಿಕೆ ಪೂರೈಸಲಾಗುತ್ತಿದೆ.
ಈಗ ಕರ್ನಾಟಕದಲ್ಲಿ ಬೇಡಿಕೆ 16393 ಮೆಗಾವ್ಯಾಟ್ ತಲುಪಿದೆ. ಇದರಲ್ಲಿ 4337 ಮೆಗಾವ್ಯಾಟ್ ರಾಜ್ಯದ ವಿದ್ಯುತ್ ಮೂಲಗಳಿಂದ ಲಭಿಸುತ್ತಿದೆ. ಉಳಿದದ್ದು ಕೇಂದ್ರೀಯ ವಿದ್ಯುತ್ ಜಾಲ, ಸೋಲಾರ್ ಮತ್ತು ಹೊರಗಿನ ರಾಜ್ಯಗಳಿಂದ ಖರೀದಿ ಮಾಡುವ ವಿದ್ಯುತ್ನಿಂದ ಭರಿಸಬೇಕು.
ರಾಯಚೂರು: ರಾಯಚೂರು ಕೇಂದ್ರದಲ್ಲಿ ಈಗ 2 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಇದೆ. ಪ್ರತಿದಿನ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಪಡೆಯಬಹುದು. ಇದಕ್ಕೆ 15 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಅತ್ಯಧಿಕ ಬೇಡಿಕೆ: ಕಳೆದ ವರ್ಷ ಆಗಸ್ಟ್ನಲ್ಲಿ 16950 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ತಲುಪಿತ್ತು. ಅಲ್ಲದೆ ದಿನದ ಬಳಕೆ ೨೯೪ ದಶಲಕ್ಷ ಯೂನಿಟ್ ಆಗಿತ್ತು.ಈಗ ಮಾರ್ಚ್ ತಿಂಗಳಲ್ಲೇ 16392 ಮೆಗಾವ್ಯಾಟ್ ಬೇಡಿಕೆಯಾಗಿದ್ದು, ದಿನದ ಬಳಕೆ 321.88 ದಶಲಕ್ಷ ಯೂನಿಟ್ ತಲುಪಿದೆ.


