ಶಿವಮೊಗ್ಗ: ಇತ್ತೀಚಿಗೆ ಶಾಲೆಗೆ ಬರುವ ಬಡಪಾಯಿ ಮಕ್ಕಳಿಂದ ಸೌಚಾಲಯ ಸ್ವಚ್ಛಮಾಡುವ ಒಳಚರಂಡಿ, ದುರಸ್ಥಿ ಮಾಡುವ ಇಂತಹ ಹಲವು ಕೆಲಸಗಳನ್ನು ಶಿಕ್ಷಕರು ಮಾಡಿಸುತ್ತಿದ್ದ ಸುದ್ದಿ ಕಳೆದ ಹಲವು ದಿನಗಳಿಂದ ಹರಿದಾಡುತಿತ್ತು .ಇದೀಗ ಶಾಲೆಯ ಮೇಲ್ಚಾವಣಿ ಮೇಲೆ ಹತ್ತಿ ಮಕ್ಕಳು ಕಸ ಗುಡಿಸುವ ಕೆಲಸವನ್ನು ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕ್ಷೇತ್ರದ ಶಾಲೆಯೊಂದರಲ್ಲಿ ಮಕ್ಕಳಿಂದ ಕೆಲಸ ಮಾಡಿರುವುದು ಕಂಡುಬಂದಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದ ಉರ್ದು ಶಾಲೆಯ ಮೇಲ್ಚಾವಣಿ ಹೆಂಚುಗಳ ಮೇಲಿದ್ದ ಕಸವನ್ನು ಎರಡನೇ ತರಗತಿ ವಿದ್ಯಾರ್ಥಿ ಸ್ವಚ್ಛಗೊಳಿಸಿದ್ದಾನೆ. ಶಾಲೆಯ ಮುಖ್ಯ ಶಿಕ್ಷಕರಿಂದ ಎಡವಟ್ಟಿನಿಂದ ಈ ಘಟನೆ ನಡೆದಿದೆ.
ಮಕ್ಕಳಿಂದ ಕೆಲಸ ಮಾಡಿಸಿದ ಶಿಕ್ಷಕರ ವಿರುದ್ಧ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.ಶಾಲೆ ಮೇಲ್ಚಾವಣಿ ಮೇಲೆ ಹತ್ತಿದಾಗ ಏನಾದರೂ ಎಡವಟ್ಟು ಆಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿದ ಸುದ್ದಿ ರಾಜ್ಯಾದ್ಯಂತ ಹರಡಿತ್ತು ಈ ಬಗ್ಗೆ ವಿದ್ಯಾರ್ಥಿಗಳನ್ನು ಶಾಲಾ ಕೆಲಸಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶ ಹೊರಡಿಸಿದ್ದರು ಆದರೆ, ಇದೀಗ ಮಂಡಗದ್ದೆ ಶಾಲೆಯಲ್ಲಿ ಮಕ್ಕಳಿಂದ ಸ್ವಚ್ಛತೆ ಮಾಡಿಸಿರುವುದು ನಡೆದಿದೆ.


