Wednesday, November 5, 2025
Flats for sale
Homeಜಿಲ್ಲೆಪುತ್ತೂರು ; ಅಲ್ಪಸಂಖ್ಯಾತರ ಓಟಿಗೋಸ್ಕರ ಕಾಂಗ್ರೆಸ್ ಹಿಂದೂಗಳನ್ನು, ರಾಮಭಕ್ತರನ್ನು ಧಮನಿಸುವ ಕಾರ್ಯ ನಡೆಸುತ್ತಿದೆ...

ಪುತ್ತೂರು ; ಅಲ್ಪಸಂಖ್ಯಾತರ ಓಟಿಗೋಸ್ಕರ ಕಾಂಗ್ರೆಸ್ ಹಿಂದೂಗಳನ್ನು, ರಾಮಭಕ್ತರನ್ನು ಧಮನಿಸುವ ಕಾರ್ಯ ನಡೆಸುತ್ತಿದೆ ; ಮುರಳೀಕೃಷ್ಣ ಹಸಂತಡ್ಕ .

ಪುತ್ತೂರು: ರಾಮನ ಕೆಲಸ ಮಾಡುವವರನ್ನು ಹತ್ತಿಕ್ಕುವ ಪ್ರಯತ್ನ ಸಿದ್ಧರಾಮಯ್ಯ ಸರಕಾರ ಮಾಡಿದರೆ ಲಂಕೆಯ ಉದಾಹರಣೆಯ ಮೂಲಕ ಸರಕಾರಕ್ಕೆ ಪ್ರತಿ ಉತ್ತರ ನೀಡಬೇಕಾಗಬಹುದು ಎಂದು ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿಯಲ್ಲಿ ರಾಮಭಕ್ತರನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ವಿರುದ್ಧ ಹಾಗೂ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ಬುಧವಾರ ಇಲ್ಲಿನ ದರ್ಬೆ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆ ವತಿಯಿಂದ ನಡೆಸಿದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಏಜೆಂಟರ ಮೂಲಕ ಅಧಿಕಾರಿಗಳನ್ನು ನೇಮಿಸುವ ಕಾರ್ಯ ಒಂದೆಡೆಯಾದರೆ, ಇನ್ನೊಂದೆಡೆ ಅಲ್ಪಸಂಖ್ಯಾತರ ಓಟಿಗೋಸ್ಕರ ಹಿಂದೂಗಳನ್ನು, ರಾಮಭಕ್ತರನ್ನು ಧಮನಿಸುವ ಕಾರ್ಯ ನಡೆಸುತ್ತಿದೆ. ದೇಶದಲ್ಲಿ ರಾಮನ ನಾಡು ನಿರ್ಮಾಣವಾಗುತ್ತಿದೆಯೇ ಹೊರತು ರಾವಣನ ನಾಡು ನಿರ್ಮಾಣ ಆಗುತ್ತಿಲ್ಲ ಎಂಬುದನ್ನು ಸಿದ್ಧರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರ ಮಂದಿರ ನಿರ್ಮಾಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಭ್ರಮದಿಂದ ಇರಬೇಕಾದ ಅಸಂಖ್ಯಾತ ಹಿಂದೂಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಸಿದ್ಧರಾಮಯ್ಯನವರಿಗೆ ತಾಕತ್ತಿದ್ದರೆ ರಾಮರಾಜ್ಯ ನಿರ್ಮಾಣದ ಕನಸು ತಡೆಯಲಿ ಎಂದು ಸವಾಲು ಎಸೆದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸಾಗುತ್ತಿರುವ ಸಂದರ್ಭದಲ್ಲಿ 32 ವರ್ಷಗಳ ಹಿಂದೆ ರಾಮ ಮಂದಿರಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸುವ ಕೆಲಸ ಸಿದ್ಧರಾಮಯ್ಯ ಸರಕಾರದಿಂದ ಆಗುತ್ತಿದೆ. ಈ ಮೂಲಕ ಹಿಂದೂಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಸೀತೆ ರಾಮನ ಜತೆಗೂಡಿ ರಾವಣನನ್ನು ಹೇಗೆ ಧ್ವಂಸ ಮಾಡಿದ್ದಾರೆ ಅದೇ ರೀತಿಯ ಉತ್ತರ ನೀಡಲು ಮಾತೆಯರು ಸೀತೆಯರಾಗಿ ಸರಕಾರವನ್ನು ಧ್ವಂಸ ಮಾಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ರಾವ್ ಬಪ್ಪಳಿಗೆ ಮಾತನಾಡಿ, 30 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಹೋರಾಟವನ್ನು ನಡೆಸಿದ ರಾಮಭಕ್ತರ ಮೇಲೆ ಸಿದ್ಧರಾಮಯ್ಯ ಸರಕಾರ ಪುನಃ ಕೇಸು ಹಾಕಿ ಬಂಧಿಸಲು ಮುಂದಾಗುತ್ತಿದ್ದು, ಇನ್ನಷ್ಟು ರಾಮಭಕ್ತರನ್ನು ಬಂಧನ ಮಾಡಲಿ. ಪರಿಣಾಮ ಹಿಂದೂ ಸಮಾಜಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂಬುದನ್ನು ಸಿದ್ಧರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದ ಅವರು, 30 ವರ್ಷ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ವಿಚಾರವನ್ನು ಎಳೆ ಎಳೆಯಾಗಿ ತೆರೆದಿಟ್ಟರು.

ಪ್ರತಿಭಟನಾ ಸಭೆಯಲ್ಲಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಹಿರಿಯ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ,ಹಿಂದೂ ಮುಖಂಡ ಡಾ.ಸುರೇಶ್ ಪುತ್ತೂರಾಯ, ರಾಜೇಶ್‍ ಬನ್ನೂರು, ರಾಧಾಕೃಷ್ಣ ಬೋರ್ಕರ್, ನಗರಸಭೆ ಸದಸ್ಯ ಜಗನ್ನಿವಾಸ ರಾವ್, ಅಶೋಕ್ ಶೆಣೈ ಭಾಮಿ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ,ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ರಾವ್, ಶಶಿಕುಮಾರ್ ಬಾಲ್ಯೊಟ್ಟು, ಸತೀಶ್ ನಾಯ್ಕ್, ವಿಹಿಂಪದ ಡಾ. ಪ್ರಸನ್ನ ಭಟ್,ವಿಶ್ವ ಹಿಂದೂ ಪರಿಷತ್ ಮುಖಂಡ ಮೋಹನದಾಸ್ ಕಾಣಿಯೂರು,ಬಿಜೆಪಿ ಸುರೇಶ್ ಆಳ್ವ,ಶ್ರೀಧರ್ ತೆಂಕಿಲ, ಸೀತಾರಾಮ ರೈ ಕೆದಂಬಾಡಿಗುತ್ತು, ಮಹಿಳಾ ಬಿಜೆಪಿಯ ಗೌರಿ ಬನ್ನೂರು, ಜಯಶ್ರೀ ಶೆಟ್ಟಿ, ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ,ನಿಶಾಂತ್, ಮೀನಾಕ್ಷಿ ಶಾಂತಿಗೋಡು, ದೀಕ್ಷಾ ಪೈ, ಹರಿಣಿ ಪುತ್ತೂರಾಯ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular