ಮೈಸೂರು : ನಗರದ ಅಗ್ರಹಾರದಲ್ಲಿರುವ ಸಿಪಾಯಿ ಗ್ರಾಂಡೆ ಪಬ್ನಲ್ಲಿ ಬಿಲ್ ಪಾವತಿ ವಿಚಾರಕ್ಕೆ ನಡೆದ ಗಲಾಟೆ ಹಲ್ಲೆಗೆ ತಿರುಗಿದ ಘಟನೆ ನಡೆದಿದೆ. ಘಟನೆಯ ದೃಶ್ಯಾವಳಿ ಪಬ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಬರ್ತ್ಡೇ ಪಾರ್ಟಿಗಾಗಿ ಪಬ್ಗೆ ಬಂದಿದ್ದ ಏಳು ಮಂದಿ ಯುವಕರ ತಂಡ ಸುಮಾರು ₹15 ಸಾವಿರದ ಬಿಲ್ ಮಾಡಿತ್ತು. ಬಿಲ್ ಪಾವತಿಸುವ ವಿಚಾರದಲ್ಲಿ ಪಬ್ ಸಿಬ್ಬಂದಿ ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ “ಕಾರ್ಡ್ ಮೂಲಕ ಪಾವತಿ ಮಾಡುತ್ತೇವೆ” ಎಂದು ಹೇಳಿ ಪಬ್ ಮ್ಯಾನೇಜರ್ ವಿನಯ್ ಅವರನ್ನು ಹೊರಗೆ ಕರೆಸಿಕೊಂಡು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಹಲ್ಲೆಯ ವೇಳೆ ವಿನಯ್ ಅವರ ಕುತ್ತಿಗೆಯಲ್ಲಿದ್ದ 23 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡಿರುವ ಆರೋಪವೂ ಕೇಳಿಬಂದಿದೆ. ಘಟನೆಯ ಸಂಪೂರ್ಣ ದೃಶ್ಯ ಪಬ್ನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪ್ರಕರಣಕ್ಕೆ ಮಹತ್ವದ ಸಾಕ್ಷ್ಯವಾಗಿ ಪರಿಗಣಿಸಲಾಗಿದೆ.
ಈ ಸಂಬಂಧ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


