ಮಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವಿಚಾರ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿರುವ ನಡುವೆ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಪ್ರಮಾಣವಚನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಖಾದರ್, ಪ್ರಜಾಪ್ರಭುತ್ವ ಮತ್ತು ಸಂಸತ್ತೀಯ ವ್ಯವಸ್ಥೆ ನಂಬಿಕೆಯಿಂದಲೇ ನಡೆಯಬೇಕು ಎಂದು ಹೇಳಿದ್ದಾರೆ. “ನಂಬಿಕೆ ಇಲ್ಲದೆ ವ್ಯವಸ್ಥೆ ನಡೆಯಲು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.
ಯಾವುದೇ ವಿಳಂಬ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಾವು ಬೆಂಗಳೂರಿನಲ್ಲಿ ಇದ್ದಾಗ ಯಾರೂ ಭೇಟಿ ಮಾಡಿಲ್ಲ ಹಾಗೂ ಸಮಯ ಕೋರಿ ಮನವಿ ಸಲ್ಲಿಸಿದ್ದು ಇತ್ತೀಚಿಗಷ್ಟೇ ಎಂದು ತಿಳಿಸಿದ್ದಾರೆ.
ಇದು ತಾಂತ್ರಿಕ ವಿಚಾರವಾಗಿದ್ದು, ಕಾನೂನುಬದ್ಧ ಅಭಿಪ್ರಾಯಗಳನ್ನು ಪಡೆಯಬೇಕಾಗಿದೆ. ಈ ಪರಿಸ್ಥಿತಿ ವಿಶೇಷವಾದದ್ದಾಗಿದ್ದು, ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಿಹೇಳಿದರು.
ಸರ್ಕಾರದ ಕಾನೂನು ಹೋರಾಟ ತನ್ನೊಂದಿಗೆ ಸಂಬಂಧಪಟ್ಟದ್ದಲ್ಲ ಎಂದು ತಿಳಿಸಿದ ಖಾದರ್, ತಾವು ಸಂವಿಧಾನಾತ್ಮಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು.
ಅಗತ್ಯವಿಲ್ಲದ ಆತುರ ಮತ್ತು ಅನುಮಾನಗಳು ಸರಿಯಲ್ಲ ಎಂದು ಎಚ್ಚರಿಸಿದ ಅವರು, ಈ ವಿಷಯವಾಗಿ ರಾಜ್ಯಪಾಲರು ಕೂಡ ತಮ್ಮೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.
“ಯಾವುದೇ ವಿಳಂಬವಾಗಿಲ್ಲ, ಪ್ರಕ್ರಿಯೆ ತಡೆಯುವ ಪ್ರಯತ್ನವೂ ಇಲ್ಲ,” ಎಂದು ಖಾದರ್ ಸ್ಪಷ್ಟಪಡಿಸಿದ್ದು, ತಪ್ಪು ನಡೆದಿದ್ದರೆ ಅದು ಯಾವಾಗ, ಎಲ್ಲಲ್ಲಿ ಮತ್ತು ಯಾರಿಂದ ಎಂಬುದನ್ನು ತನಿಖೆಯಿಂದ ತಿಳಿಯಬೇಕು ಎಂದು ಹೇಳಿದ್ದಾರೆ.


