ಮಂಗಳೂರು ; ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದರೆ ಪೊಲೀಸ್ ಠಾಣಾ ಸರಹದ್ದಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದ್ದಾರೆ.

ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ ಮುಗಿದ ಬಳಿಕ, ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ನೇತೃತ್ವದಲ್ಲಿ ಕೆಲವರು ಅಕ್ರಮವಾಗಿ ಸೇರಿಕೊಂಡು ಕೋಳಿಗಳಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಡುತ್ತಿದ್ದರು. ಈ ವೇಳೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಕೋಳಿ ಅಂಕದಲ್ಲಿ ತೊಡಗಿದ್ದ 6 ಆರೋಪಿಗಳನ್ನು ಬಂಧಿಸಿ, ₹1,480 ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ 17 ಜೀವಂತ ಕೋಳಿಗಳು ಹಾಗೂ ಕೋಳಿ ಅಂಕಕ್ಕೆ ಬಳಸಲಾಗುತ್ತಿದ್ದ 2 ಬಾಳುಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 189(2), 193, 190 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87, 93 ಮತ್ತು ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960ರ ಕಲಂ 11(1)(ಟಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


