ಮಂಗಳೂರು : ಮಂಗಳೂರು ಹೊರವಲಯದ ಬಪ್ಪೆ ಸಮೀಪದ ಪೆರ್ಮುದೆಯಲ್ಲಿ ಮನೆಯ ಅಂಗಳಕ್ಕೆ ಚಿರತೆಯೊಂದು ನುಗ್ಗಿ, ಅಲ್ಲೇ ಮಲಗಿದ್ದ ಶ್ವಾನವನ್ನು ಹೊತ್ತೊಯ್ದ ಘಟನೆ ನಡೆದಿದೆ.
ಪೆರ್ಮುದೆಯ ದಿವಂಗತ ಜಿ.ಕೆ. ನೋಣಯ್ಯ ಪೂಜಾರಿ ಅವರ ಮನೆಯ ಅಂಗಳಕ್ಕೆ ರಾತ್ರಿ ವೇಳೆ ಏಕಾಏಕಿ ಚಿರತೆ ಪ್ರವೇಶಿಸಿದೆ. ಮನೆಯ ಸಮೀಪ ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿದ ಚಿರತೆ, ಅದನ್ನು ಬಾಯಿಯಲ್ಲಿ ಹಿಡಿದುಕೊಂಡು ಅಲ್ಲಿಂದ ತೆರಳಿದೆ.
ಚಿರತೆ ಶ್ವಾನವನ್ನು ಹೊತ್ತೊಯ್ಯುತ್ತಿರುವ ಸಂಪೂರ್ಣ ದೃಶ್ಯ ಮನೆಯ ಆವರಣದಲ್ಲಿ ಅಳವಡಿಸಲಾಗಿದ್ದ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಇದೀಗ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮನೆಯ ಅಂಗಳದವರೆಗೂ ಚಿರತೆ ಬಂದಿರುವುದು ಸುತ್ತಮುತ್ತಲಿನ ನಿವಾಸಿಗಳಲ್ಲಿ ಭಯಕ್ಕೆ ಕಾರಣವಾಗಿದೆ. ಇದೇ ಪ್ರದೇಶದಲ್ಲಿ ಮತ್ತಷ್ಟು ಚಿರತೆಗಳ ಸಂಚಾರವಿದೆಯೇ ಎಂಬ ಬಗ್ಗೆಯೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಚಿರತೆಗಳ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆಯ ಚಲನವಲನದ ಬಗ್ಗೆ ನಿಗಾ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಜನವಸತಿ ಪ್ರದೇಶದ ಸಮೀಪವೇ ಚಿರತೆ ಕಾಣಿಸಿಕೊಂಡಿರುವುದರಿಂದ, ರಾತ್ರಿ ವೇಳೆ ಸಾರ್ವಜನಿಕರು ಹಾಗೂ ಸಾಕುಪ್ರಾಣಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.

