ಶಿವಮೊಗ್ಗ : ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಬಳಿ ಸುಮಾರು 4 ಕಿ.ಮೀ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಸಂಚಾರಕ್ಕೆ ಗ್ರಾಮಸ್ಥರು ಪರದಾಡುವಂತಾಗಿದೆ.

ರಸ್ತೆಯ ಕೆಸರಿನಲ್ಲೇ ಭತ್ತದ ನಾಟಿ ಮಾಡುವ ಮೂಲಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಕೂಡ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಮರದ ಕಂಬಕ್ಕೆ ರೋಗಿಯನ್ನು ಕಟ್ಟಿ ಸಾಗಿಸುವ ಅಣುಕು ಪ್ರದರ್ಶನ ನಡೆಸಿ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿದರು.
ಸಂಪಳ್ಳಿ, ಕರಡಿಗ, ಬೆಳಕೋಡು ಹಾಗೂ ಕೊಳವಳ್ಳಿ ಗ್ರಾಮಸ್ಥರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಮಗೆ ವಿಷ ಕೊಟ್ಟುಬಿಡಿ” ಎಂದು ಪ್ರತಿಭಟನಾಕಾರರು ಹಿಡಿಶಾಪ ಹಾಕಿದರು.
ರಸ್ತೆ ಕಾಮಗಾರಿ ತಕ್ಷಣ ಆರಂಭಿಸದಿದ್ದರೆ ಪಕ್ಷಾತೀತವಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

