ಬೆಂಗಳೂರು ; ನಗರದ ಹಲವು ಕಡೆಗಳಲ್ಲಿ ಮೊನ್ನೆ ಮಧ್ಯರಾತ್ರಿ ಏಕಕಾಲದಲ್ಲಿ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ದ ಪೊಲೀಸರು ಅಕ್ರಮವಾಗಿ ನೆಲೆಸಿರುವ ನೂರಕ್ಕೂ ಅಧಿಕ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದಾರೆ.
ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳ ಮನೆ ಮೇಲೆ ಸಿಸಿಬಿ ಪೊಲೀಸರ ಕಾರ್ಯಾಚರಣೆಯು ನಾಲ್ಕು ವಿಭಾಗಗಳಲ್ಲಿರುವ ಅಕ್ರಮ ನಿವಾಸಿಗಳ ಮನೆ ಮೇಲೆ ನಡೆದಿದೆ. ಬಾಂಗ್ಲಾ ಗಡಿಭಾಗದಲ್ಲಿ ನುಸುಳಿ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಪ್ರಜೆಗಳು ಇವರಾಗಿದ್ದು, ದೇಶದಲ್ಲಿ ನೆಲೆಸುವುದಕ್ಕೆ ಯಾವುದೇ ಸೂಕ್ತ ದಾಖಲೆ ಇವರ ಬಳಿ ಇಲ್ಲ.
ಗುಪ್ತಚರ ಮಾಹಿತಿ ಆಧರಿಸಿ ದಾಳಿ ಮಾಡಿರುವ ಸಿಸಿಬಿ ತಂಡ ಮಧ್ಯರಾತ್ರಿ 1 ಗಂಟೆಯಿಂದ ಮುಂಜಾನೆ 5 ರವರೆಗೂ ದಾಳಿ ನಡೆಸಿ ನೂರಕ್ಕೂ ಹೆಚ್ಚ ಅಕ್ರಮ ನಿವಾಸಿಗಳನ್ನು ಪತ್ತೆ ಹಚ್ಚಲಾಗಿದೆ. ದಾಳಿಯ ವೇಳೆ ಹಲವರು ಮತದಾರರ ಗುರುತಿನ ಪತ್ರ ಮಾಡಿಸಿಕೊಂಡಿರುವುದು ಪತ್ತೆ ಯಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.
ಅಕ್ರಮ ವಾಸಿಗಳನ್ನು, ಸೂಕ್ತ ದಾಖಲೆಗಳ ಪರಿಶೀಲನೆ ಮಾಡದೆ ಇವರಿಗೆ ಬಾಡಿಗೆ ಮನೆಗಳನ್ನು ಹಾಗೂ ಕೊಠಡಿಗಳನ್ನು ನೀಡಿದವರನ್ನು ಕೂಡ ಪ್ರಶ್ನಿಸಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಫ್ಯಾಕ್ಟರಿ, ಕೂಲಿ, ಹೋಟೆಲ್ಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಹಲವರು ಕೆಲವು ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ಗೊತ್ತಾಗಿದೆ.


