ನವದೆಹಲಿ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸದನವನ್ನು ಪಕ್ಷಪಾತವಾಗಿ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ವಿಪಕ್ಷಗಳು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸೋಮವಾರ ವಿಫಲವಾಗಿವೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ವಿಪಕ್ಷಗಳು ಚರ್ಚೆಗೆ ಒತ್ತಾಯಿಸಿದ್ದರಿಂದ ಗದ್ದಲದ ನಡುವೆ ಸದನ ಹಲವು ಬಾರಿ ಮುಂದೂಡಲ್ಪಟ್ಟ ಕಾರಣ ನಿರ್ಣಯ ಅಂಗೀಕರಿಸಲು ವಿಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪೀಕರ್ ವಿರುದ್ಧದ ನಿರ್ಣಯಕ್ಕೆ ಉತ್ತರಿಸುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ೧೧೮ ವಿಪಕ್ಷ ಸದಸ್ಯರು ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದ ನೊಟೀಸ್ ನೀಡಿದ್ದರು. ಸದನದಲ್ಲಿ ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನಿರಾಕರಣೆ, ಸಾರ್ವಜನಿಕ ಹಿತಾಸಕ್ತಿ ವಿಷಯ ಎತ್ತಿದ್ದಕ್ಕಾಗಿ ಸಂಸದರನ್ನು ಉಳಿದ ಅಧಿವೇಶನದಿಂದ ಅವಮಾನತ್ತು ಮಾಡಿದ್ದು ಸೇರಿದಂತೆ ಹಲವು ಆರೋಪಗಳನ್ನು ಮಾಡಿರುವ ಈ ಪ್ರತಿಪಕ್ಷ ಸದಸ್ಯರು, ಸ್ಪೀಕರ್ ನಿಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ದೂರಿದ್ದರು.
ಬಿರ್ಲಾ ವಿವಾದಾತ್ಮಕ ವಿಷಯಗಳಲ್ಲಿ ಆಡಳಿತ ಪಕ್ಷದ ಹೇಳಿಕೆಯನ್ನು ಬಹಿರಂಗವಾಗಿ ಸಮರ್ಥಿಸುತ್ತಾರೆ. ಇದು ಸಂಸತ್ತಿನ ಕಾರ್ಯನಿರ್ವಹಣೆಗೆ ಅಪಾಯ ಎಂಬುದು ವಿಪಕ್ಷ ಸದಸ್ಯರ ಪ್ರಮುಖ ಆರೋಪ. ಸಂವಿಧಾನದ ಪ್ರಕಾರ ಈ ವಿಷಯದ ಬಗ್ಗೆ ಚರ್ಚೆಯಾಗುವ ಸಂದರ್ಭದಲ್ಲಿ ಸ್ಪೀಕರ್ ಸದನದಲ್ಲಿ ಉಪಸ್ಥಿತರಿದ್ದು ತಮ್ಮನ್ನು ಸಮರ್ಥಿಸಬಹುದು ಆದರೆ ಸ್ಪೀಕರ್ ಪೀಠ ಅಲಂಕರಿಸುವAತಿಲ್ಲ. ಈ ಹಿಂದೆ 2014 ರಲ್ಲಿ ವಿಪಕ್ಷಗಳು ರಾಜ್ಯಸಭೆಯ ಅಧ್ಯಕ್ಷ ಮತ್ತು ಉಪರಾಷ್ಟçಪತಿ ಜಗದೀಪ್ ಧನಕರ್ ವಿರುದ್ಧ ಇದೇ ರೀತಿಯ ನಿರ್ಣಯ ಮಂಡಿಸಿದ್ದವು.


