ಕೊಪ್ಪಳ : ನರೇಗಾ ಯೋಜನೆಯ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ಪ್ರಯುಕ್ತ 2024-25 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ತಮ್ಮ ಕಾಮಗಾರಿಗಳ ಬೇಡಿಕೆ ಅರ್ಜಿಗಳನ್ನು ಸಲ್ಲಿಸುವುದು ಅಗತ್ಯವಾಗಿದೆ ಎಂದು ಗ್ರಾಮ ಪಂಚಾಯತಿ ಪಿಡಿಓ ಪ್ರಕಾಶ ಹೀರೆಮಠ ಅವರು ಹೇಳಿದರು.
ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೈ ಕಿಸಾನ್ ತಾಂಡಾದಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ನರೇಗಾ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರಿಂದ ಬೇಡಿಕೆಗಳನ್ನು ಸಂಗ್ರಹಿಸಲು ಮನೆ-ಮನೆ ಜಾಗೃತಿ ಜಾಥಾ, ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ತಮಗೆ ಅಗತ್ಯ ಹಾಗೂ ಅವಶ್ಯಕವಾದ ಕಾಮಗಾರಿಗಳನ್ನು ತಿಳಿಸಲು ಚೀಟಿಗಳನ್ನು ಬರೆದು ಬೇಡಿಕೆ ಪೆಟ್ಟಿಗೆಯಲ್ಲಿ ಹಾಕುವಂತೆ ತಿಳಿಸಿದರು.
ನಂತರ ತಾ.ಪಂ ಐಇಸಿ ಸಂಯೋಜಕ ಸೋಮನಾಥ ಅವರು ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಇಂಗು ಗುಂಡಿ, ದನದ ಕೊಟ್ಟಿಗೆ, ಮೇಕೆ ಶೆಡ್ , ಕೋಳಿ ಶೆಡ್ ಹಂದಿ ಶಡ್, ಕೃಷಿ ಹೊಂಡ, ಬದು ನಿರ್ಮಾಣ ಸೇರಿ ನರೇಗಾದಡಿ ಅನುಷ್ಠಾನ ಇಲಾಖೆಗಳಲ್ಲಿ ತೋಟಗಾರಿಕೆ, ಅರಣ್ಯ ಹಾಗೂ ರೇಷ್ಮೆ ಬೆಳೆಗಳ ಬಗ್ಗೆ ರೈತರಿಗೆ ಸಿಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ನಂತರ ಹೊಸದಾಗಿ ಜಾರಿಗೆ ಬಂದ ಆದೇಶದಂತೆ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಮೊತ್ತ ರೂ. 2.50ಲಕ್ಷ ದಿಂದ ರೂ. 5 ಲಕ್ಷದ ವರೆಗೆ ಹೆಚ್ಚಳವಾಗಿದೆ. ಫಲಾನುಭವಿಗಳು ತಮ್ಮ ಜೀವಿತಾವಧಿಯಲ್ಲಿ 5ಲಕ್ಷದ ವರೆಗೆ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ನಂತರ ಮನೆ ಮನೆ ತೆರಳಿ, ನರೇಗಾ ಯೋಜನೆಯ ಮಾಹಿತಿಯಳ್ಳ ಕರಪತ್ರ ನೀಡಿ ವೈಯಕ್ತಿಕ ಕಾಮಗಾರಿಗಳ ಬೇಡಿಕೆಗಳನ್ನು ಕೂಲಿಕಾರರಿಂದ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಹೆಬೂಬ್ ಸಾಬ್,ಗ್ರಾಮ ಪಂಚಾಯತ ಸದಸ್ಯ ಹೊನ್ನೂರಪ್ಪ, ಪ್ರಮುಖರಾದ ಮಹಮ್ಮದ್ ಮಾನ್ವಿ, ಗ್ರಾ.ಪಂ ಸಿಬ್ಬಂದಿಗಳಾದ ವೀರೇಶ್, ಯಶವಂತ್, ಬಸವರಾಜ್, ನಾಗರಾಜ್ ಮಂಜುನಾಥ ಸೇರಿ ಇತರರಿದ್ದರು.


