Wednesday, March 11, 2026
Flats for sale
Homeರಾಜ್ಯಹೊಸನಗರ ; ಶೇ.100 ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರನ್ನು ವಿಧಾನಸೌಧದಲ್ಲಿ ಗೌರವಿಸುವಂತಾಗಬೇಕು ; ಬೇಳೂರು ಗೋಪಾಲಕೃಷ್ಣ.

ಹೊಸನಗರ ; ಶೇ.100 ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರನ್ನು ವಿಧಾನಸೌಧದಲ್ಲಿ ಗೌರವಿಸುವಂತಾಗಬೇಕು ; ಬೇಳೂರು ಗೋಪಾಲಕೃಷ್ಣ.

ಹೊಸನಗರ : ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಪಡೆದ ಶಾಲೆಗಳ ಶಿಕ್ಷಕರನ್ನು ಗುರುತಿಸಿ ವಿಧಾನಸೌಧ ಆವರಣದಲ್ಲಿ ಅದ್ದೂರಿಯಾಗಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಲ್ಲಿ (Chief Minister) ಮಾತನಾಡುವುದಾಗಿ ಹೊಸನಗರ-ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿದರು.

ಹೊಸನಗರ ಶಾಸಕರ ಮಾದರಿ ಶಾಲೆಯಲೆಯ ಆವರಣದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೊಸನಗರ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 92% ಕ್ಕಿಂತಲ್ಲೂ ಹೆಚ್ಚು ಫಲಿತಾಂಶ ಬಂದಿರುವುದು ಸಂತೋಷದಾಯಕ ವಿಷಯವಾಗಿದ್ದು ಹಿಂದೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚು ಫಲಿತಾಂಶ ಬರುತ್ತಿತ್ತು. ಆದರೆ ಶಿಕ್ಷಕರ ಕೊಡುಗೆಯಿಂದ ಹೊಸನಗರ-ಸಾಗರದ ವಿದ್ಯಾರ್ಥಿಗಳ ಮಧ್ಯೆ ಫಲಿತಾಂಶಕ್ಕಾಗಿ ಹೋರಾಟ ನಡೆಯುತ್ತಿದೆ. ನಮ್ಮ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆಯಿಲ್ಲ. ಶಿಕ್ಷಕರ ಕೊರತೆಯನ್ನು ನಮ್ಮ ಸರ್ಕಾರ 13,500 ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುವ ಮೂಲಕ ಶಿಕ್ಷಕರ ಕೊರತೆಯನ್ನು ನೀಗಿಸಿದ್ದಾರೆ ಎಂದರು.

ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗೆ ಪೂರಕವಾದ ವಾತಾವರಣ ಕಲ್ಪಿಸಿ ಅವರನ್ನು ಸ್ಪರ್ಧೆಗೆ ತಯಾರು ಮಾಡುವ ಶಿಕ್ಷಕರ ಆಸಕ್ತಿ ಹಾಗೂ ಶ್ರಮ ಶ್ಲಾಘನೀಯ. ಹಲವು ಶಾಲೆಗಳಲ್ಲಿ ಶಾಲಾ ಸಮಿತಿಯವರು ಮೂಲ ಸೌಕರ್ಯಗಳ ಅಭಿವೃದ್ಧಿಗೂ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮಲೆನಾಡು ಭಾಗದಲ್ಲಿ ಸಂಪರ್ಕ, ಸಂವಹನದ ಕೊರತೆ ಮಕ್ಕಳ ಕಲಿಕೆಗೆ ಸವಾಲಾಗಿದೆ. ಆದರೆ ಅದನ್ನು ಮೀರಿ ಇಲ್ಲಿನ ಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಇಂದಿನ ಮಕ್ಕಳು ಸಾಕಷ್ಟು ಛೂಟಿಯಾಗಿದ್ದಾರೆ. ಅದಕ್ಕೆ ಪೂರಕ ವಾತಾವರಣ ಕಲ್ಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಮರು ಮೌಲ್ಯಮಾಪನದ ಫಲಿತಾಂಶದ ಬಳಿಕ ಈ ವರ್ಷ ಹೊಸನಗರ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಇನ್ನಷ್ಟು ಉತ್ತಮ ಸಾಧನೆ ಗಳಿಸುವ ನಿಟ್ಟಿನಲ್ಲಿ ಕಾರ‍್ಯತಂತ್ರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಇಓ ಎಚ್.ಆರ್.ಕೃಷ್ಣಮೂರ್ತಿ ಹೇಳಿದರು.

ಶಾಲಾ ಸಮಿತಿ ಅಧ್ಯಕ್ಷ ಕೆ.ಕೆ.ಅಶ್ವಿನಿಕುಮಾರ್ ಮಾತನಾಡಿ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅತೀವ ಪೈಪೋಟಿ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದು ಅಲ್ಲದೇ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಸಲು ಸರ್ಕಾರಗಳು ಅಲ್ಪ ಸ್ವಲ್ಪ ಧನ ಸಹಾಯ ನೀಡಲು ಮುಂದಾಗಬೇಕೆಂದರು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಅಕ್ಷರ ದಾಸೋಹ ಸಂಯೋಜನಾಧಿಕಾರಿ ನಾಗರಾಜ್, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಸವಣ್ಯಪ್ಪ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಬೇರಪ್ಪ, ಪಟ್ಟಣ ಪಂಚಾಯಿತಿ ಸದಸ್ಯೆ ಶಾಹೀನಾ ನಾಸೀರ್, ಶಾಲಾ ಶಿಕ್ಷಕರ ಸಂಘದ ಪ್ರಮುಖರಾದ, ಅಲ್ತಾಫ್, ಕರಿಬಸಪ್ಪ, ಸತ್ಯನಾರಾಯಣ, ಗೌತಮ್ ಕುಮಾರಸ್ವಾಮಿ, ರಾಘವೇಂದ್ರ ಹೆಚ್.ಎಸ್, ಪ್ರದೀಪ್ ಹೆಚ್.ಕೆ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular