ಸುರತ್ಕಲ್ ; 1988ನೇ ಇಸವಿಯಲ್ಲಿ ಪುನರ್ನಿವ್ರಸಿತ ಕಾಟಿಪಳ್ಳ ಕೈಕಂಬ ಪ್ರದೇಶದಲ್ಲಿ ಸರಕಾರದಿಂದ ಮಂಜೂರಾದ ಜಮೀನಿನಲ್ಲಿ ಕಾಟಿಪಳ್ಳ, ಕೃಷ್ಣಾಪುರ, ಬಾಳ, ಕುತ್ತೆತ್ತೂರು, ಕಾನ, ಕಟ್ಲ, ಸೂರಿಂಜೆ, ಮಧ್ಯ ಇತ್ಯಾದಿ ಪರಿಸರದ ಗ್ರಾಮಸ್ತರು ಸೇರಿಕೊಂಡು ಶ್ರೀ ಮಹಾಗಣಪತಿ ದೇವಸ್ಥಾನವನ್ನು ನಿರ್ಮಿಸಿದರು. ಬಲಮುರಿ ಶ್ರೀ ಮಹಾಗಣಪತಿ ದೇವರು ನೆಲೆಯಾದ ಪುಣ್ಯ ಪ್ರದೇಶಕ್ಕೆ ಯತಿಶ್ರೇಷ್ಠರಾದ ಪೈಜಾವರ ವಿಶ್ವೇಶ್ವತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಗಣೇಶಪುರ ಎಂಬ ನಾಮಕರಣವನ್ನು ಮಾಡಿದರು. ಕೇವಲ ಮೂರು ದಶಕಗಳ ಅವಧಿಯಲ್ಲಿ ಶ್ರೀಕ್ಷೇತ್ರ ಗಣೇಶಪುರವು ದೇಶದ ಇತಿಹಾಸದಲ್ಲೇ ಪ್ರಥಮ ಎಂಬಂತೆ ಹಿಂದೂ ಧಾಮಿಕ ದತ್ತಿ ಇಲಾಖೆಯ “A” ಗ್ರೇಡ್ ದೇವಳವನ್ನಾಗಿ ಪರಿವರ್ತಿಸುವ ಕಾರಣಿಕವನ್ನು ಶ್ರೀ ಮಹಾಗಣಪತಿ ದೇವರು ಪ್ರದರ್ಶಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಅಧ್ಯಕ್ಷರಾದ ಧರ್ಮೇಂದ್ರ ಗಣೇಶಪುರರವರು ತಿಳಿಸಿದ್ದಾರೆ.
ಗಣೇಶಪುರ ದೇವಳದಲ್ಲಿ 2004ನೇ ಇಸವಿಯ ಏಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ಮತ್ತು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಎಂಬಂತೆ ಮೂಡಪ್ಪ ಸೇವೆಯು ನಡೆದಿತ್ತು. 2020 ಎಪ್ರಿಲ್ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದ ಏರ್ಪಾಡು ನಡೆದಿತ್ತು. ಆದರೆ ವಿಶ್ವವನ್ನು ಕಾಡಿದ ಕೊರೊನಾ ಮಾರಿಯಿಂದಾಗಿ ಕಾರ್ಯಕ್ರಮವು ರದ್ದಾಗಿತ್ತು. ಆದರೆ ಶ್ರೀ ಮಹಾಗಣಪತಿ ದೇವಳವು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರವಾಗಿ ಅಷ್ಟಬಂಧ ನಡೆದು ಪುನರ್ ಪ್ರತಿಷ್ಠೆಯನ್ನು ಸರಳವಾಗಿ ಮಾಡಲಾಗಿತ್ತು. ಬ್ರಹ್ಮಕಲಶೋತ್ಸವವನ್ನು ಕೋವಿಡ್ ನಿಯಮಾವಳಿಯ ಕಾರಣದಿಂದ ಮುಂದೂಡಲಾಗಿತ್ತು. ಅಂದು ವಿರಾಟ್ ಭಜನೋತ್ಸವ, ನಾಗಮಂಡಲೋತ್ಸವ ಮತ್ತು ಪರಿವಾರ ದೈವವಾದ ಜಾರಂದಾಯ ದೈವಕ್ಕೆ ನೇಮೋತ್ಸವ ಮಾಡುವ ಸಂಕಲ್ಪವನ್ನು ಮಾಡಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ದೇವಳದಲ್ಲಿ ಎಪ್ರಿಲ್ 18 ರಿಂದ 26ರ ವರೆಗೆ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ, ಜಾತ್ರಾಮಹೋತ್ಸವ, ನೂತನ ಬ್ರಹ್ಮರಥ ಸಮರ್ಪಣೆ ಬ್ರಹ್ಮರಥೋತ್ಸವ, ಭಜನಾ ಸಂಭ್ರಮೋತ್ಸವ, ನಾಗಮಂಡಲೋತ್ಸವ, ಜಾರಂದಾಯ ದೈವದ ನೇಮೋತ್ಸವವು ಮತ್ತು ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. 2018 ನೇ ಇಸವಿಯಲ್ಲಿ ಶ್ರೀಕ್ಷೇತ್ರದಲ್ಲಿ ನಡೆದ ಆರೂಢ ಪ್ರಶ್ನೆಯಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥದ ಸಮರ್ಪಣೆಯಾಗಬೇಕು ಎಂಬ ಅಪೇಕ್ಷೆ ಮತ್ತು ಕ್ಷೇತ್ರದ ಜೀರ್ಣೋದ್ದಾರಕ್ಕೆ ದೈವದ ಅನುಗ್ರಹ ಕಂಡು ಬಂದಿತ್ತು. ಅಂದು ಆರ್ಥಿಕ ಹಿನ್ನಡೆಯ ಕಾರಣದಿಂದ ಬ್ರಹ್ಮರಥ ಸಮರ್ಪಣೆಗೆ ತೊಡಕಾಗಿತ್ತು. ಶ್ರೀ ಮಹಾಗಣಪತಿ ದೇವರ ಇಚ್ಚೆಯಂತೆ ಈ ಬಾರಿ ಬ್ರಹ್ಮರಥದೊಂದಿಗೆ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ ಮಾಡುವ ಪುಣ್ಯ ನಮ್ಮದು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮರಥವು ಮೂಡುಬಿದ್ರೆ ನಾರಾಯಣ ಆಚಾರ್ಯರ ಪುತ್ರ ಹರೀಶ್ ಆಚಾರ್ಯರ ನೇತೃತ್ವದಲ್ಲಿ ಸಂಪಿಗೆಯಲ್ಲಿ ಬ್ರಹ್ಮರಥದ ನಿರ್ಮಾಣವಾಗುತ್ತಿದ್ದು ಅದು ಎಪ್ರಿಲ್ 12 ರಂದು ಭವ್ಯ ಮೆರವಣಿಗೆಯ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಲಿದೆ.
ದೇವಳದ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಶ್ರೀ ಜಾರಂದಾಯ ದೈವದ ಭೇಟಿ ಕಾರ್ಯಕ್ರಮವು ನಡೆಯುತ್ತಿದೆ. ಶ್ರೀ ಮಹಾಗಣಪತಿ ದೇವರ ವಚನದ ಪ್ರಕಾರ ಈ ಬಾರಿ ದೇವಸ್ಥಾನದ ಪರಿಸರದಲ್ಲಿ ಹಾಕಲಾಗುವ ಕೊಡಿ ಅಡಿಯಲ್ಲಿ ಜಾರಂದಾಯ ದೈವದ ನೇಮೋತ್ಸವವು ನಡೆಯಲಿದೆ. ಈ ಸೇವೆಯು ಈ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು ಮುಂದಿನ ದಿನಗಳಲ್ಲಿ ಆಯಾಯ ಸಂದರ್ಭದ ವ್ಯವಸ್ಥೆಗೆ ಸಂಬಂಧಿಸಿದವರ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ ಎಂದರು .
ಶ್ರೀ ಕ್ಷೇತ್ರದಲ್ಲಿ ಉಮಾಮಹೇಶ್ವರಿ, ದುರ್ಗಾಪರಮೇಶ್ವರಿ, ನವಗ್ರಹ, ನಾಗ ಮತ್ತು ಚಾಮುಂಡಿ ದೈವದ ಸಾನಿಧ್ಯವಿದೆ. ಪ್ರತಿ ತಿಂಗಳ ಸಂಕಷ್ಟಹರ ಕಾರ್ಯಕ್ರಮವು ಅನ್ನಸಂತರ್ಪಣೆಯೊಂದಿಗೆ ಜರಗುತ್ತಿದೆ. ಅಂಗಾರಕ ಸಂಕಷ್ಟಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರತಿ ಹುಣ್ಣಿಮೆಯಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಜರಗುತ್ತಿದೆ. ನವರಾತ್ರಿ ಸಂದರ್ಭದಲ್ಲಿ ಹತ್ತು ದಿನಗಳ ಸೇವಾ ಯಕ್ಷಗಾನ ಬಯಲಾಟ ನಡೆಯುತ್ತಿದೆ. ಶ್ರೀಚಕ್ರಪೂಜೆ, ದೀಪೋತ್ಸವ. ಚೌತಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಕೊರಳು ವಿತರಿಸಿ ತೆನೆ ಹಬ್ಬ ಆಚರಿಸಲಾಗುತ್ತಿದೆ. ದೇವಳದ ಪರಿಸರದ ಹತ್ತು ಸಹಸ್ರಕ್ಕೂ ಹೆಚ್ಚು ಮಂದಿ ಶ್ರದ್ದಾಭಕ್ತಿಯಿಂದ ದೇವಳದಿಂದ ತೆನೆ ಪಡೆದು ತಮ್ಮ ತಮ್ಮ ಮನೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್,ವ್ಯವಸ್ಥಾಪನ ಸಮೀತಿಯ ಸದಸ್ಯರು ಎ.ವಾದಿರಾಜ,ಜಿ.ಕೆ ಸುಂದರ್,ಯಾದವ ಕೋಟ್ಯಾನ್,ಹಾಗೂ ಪ್ರಶಾಂತ್ ಮುಡಾಯಿಕೋಡಿಯವರು ಉಪಸ್ಥಿತರಿದ್ದರು.