ಮಂಗಳೂರು : ಶಿಕ್ಷಕರ ವೃತ್ತಿಪರ ಅಭಿವೃದ್ಧಿ, ಶೈಕ್ಷಣಿಕ ಸಂಶೋಧನೆ, ನವೀನ ಬೋಧನಾ ವಿಧಾನಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ಸ್ಥಾಪಿಸಲಾದ ಶಕ್ತಿ ರಿಸರ್ಚ್ & ಟ್ರೈನಿಂಗ್ ಇನ್ಸ್ಟಿಟ್ಯೂಟ್ನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಿದರು.


HPCLನ CSR ಉಪಕ್ರಮದಡಿ ಸುಮಾರು ₹2.95 ಕೋಟಿ ನೆರವು ನೀಡಲಾಗಿದ್ದು, ಸುಮಾರು 20 ಸಾವಿರ ಚದರ ಅಡಿ ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ.
ಸಂಸ್ಥೆಯಲ್ಲಿ AI, ಡಿಜಿಟಲ್ ಶಿಕ್ಷಣ, ತಂತ್ರಜ್ಞಾನ ಆಧಾರಿತ ಕಲಿಕೆ ಹಾಗೂ ಹೊಸ ಬೋಧನಾ ವಿಧಾನಗಳ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
NEP-2020 ಹಾಗೂ NCF ಮಾರ್ಗಸೂಚಿಗಳ ಆಧಾರದಲ್ಲಿ ತರಬೇತಿ ಮತ್ತು ಶೈಕ್ಷಣಿಕ ಸಂಶೋಧನೆಗೆ ಒತ್ತು ನೀಡಲಾಗುತ್ತದೆ.
ಪ್ರತಿವರ್ಷ ಶಕ್ತಿ ಎಜುಕೇಶನ್ ಟ್ರಸ್ಟ್ನ ಶಿಕ್ಷಕರಿಗಾಗಿ 4 ಆಂತರಿಕ ತರಬೇತಿ, ವಿದ್ಯಾರ್ಥಿಗಳಿಗಾಗಿ 2 ಅಭಿವೃದ್ಧಿ ಕಾರ್ಯಕ್ರಮ ಹಾಗೂ ಇತರೆ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗಾಗಿ 2 ಬಾಹ್ಯ ತರಬೇತಿ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಲಾಗಿದೆ.
ಮುಂದಿನ ಹಂತದಲ್ಲಿ ಸಂಸ್ಥೆಯನ್ನು ಕರಾವಳಿ ಕರ್ನಾಟಕದ ಶಿಕ್ಷಕರ ತರಬೇತಿ, ಶೈಕ್ಷಣಿಕ ಸಂಶೋಧನೆ ಹಾಗೂ ಅಕಾಡೆಮಿಕ್ ಸಹಯೋಗದ ಪ್ರಾದೇಶಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ.
ವೇದವ್ಯಾಸ ಕಾಮತ್ ಮಾತನಾಡಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ ಹಾಗೂ ಪ್ರಾಯೋಗಿಕ ಅನುಭವ ನೀಡುವುದು ಅಗತ್ಯ. ಇಂತಹ ಸಂಸ್ಥೆಗಳು ಯುವಜನರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದರು.
ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವ ಸಂಸ್ಥೆಯ ಅಭಿವೃದ್ಧಿ ಸಂತಸದ ಸಂಗತಿ. ಸಮಾಜದ ಬದಲಾವಣೆಗೆ ಶಿಕ್ಷಣ ಅಗತ್ಯವಾಗಿದ್ದು, CSR ನಿಧಿಯನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ HPCL ನಿರ್ದೇಶಕ ಕೆ.ಎಸ್. ಶೆಟ್ಟಿ, ಶರುಣ ನಾಯ್ಕ್, ಪ್ರವೀಣ್ ಕುಮಾರ್ ಶೆಟ್ಟಿ, ರಮೇಶ್ ಕೆ. ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

