ಮಂಗಳೂರು : ಬಾಗಿಲು ಬಡಿದು ಕುಡಿಯಲು ನೀರು ಬೇಕೆಂದು ಕೇಳಿ,ಬೆದರಿಸಿ ಮನೆಯ ಹಂಚನ್ನು ತೆಗೆದು ನುಗ್ಗಿ “ಬಂಗಾರ್ ಒಲ್ಪ ಉಂಡು” (ಬಂಗಾರ ಎಲ್ಲಿದೆ) ಎಂದು ತುಳುವಿನಲ್ಲಿ ಜೋರಾಗಿ ಬೆದರಿಸಿ, ಬೈರಾಸನ್ನು ಮನೆಯ ಯಜಮಾನರ ಕುತ್ತಿಗೆಗೆ ಬಿಗಿದು “ಬೊಬ್ಬೆ ಪಾಡುಂಡ ಕೆರ್ಪೆ ಬಂಗಾರ್ ಇಜ್ಜಾ ಉಂಡಾ ತೂಪ ಎಂಕುಲ್ ಏರೆನ್ಲಾ ಲೆತ್ತ್ಂಡ ನಾಲಿಡ್ ಪತ್ತ್ದ್ ಕೆರ್ಪೆ” (ಬೊಬ್ಬೆ ಹೊಡೆದರೆ ಸಾಯಿಸುತ್ತೇನೆ ಬಂಗಾರ ಇದೆಯೋ ಇಲ್ಲವೋ ನೋಡುತ್ತೇನೆ ಯಾರನ್ನಾದರೂ ಕರೆದರೆ ಕುತ್ತಿಗೆ ಹಿಸುಕಿ ಸಾಯಿಸುತ್ತೇನೆ) ಎಂದು ತುಳುವಿನಲ್ಲಿ ಬೆದರಿಸಿ ಗೋದ್ರೇಜ್ ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆ ಹಾಗೂ ಪರ್ಸ್ ನಲ್ಲಿ ಸುಮಾರು 14,000/- ರೂಪಾಯಿ ನಗದು ಹಣವನ್ನು ದೋಚಿದ ಘಟನೆ ಸಸಿಹಿತ್ಲು ರಸ್ತೆ, ಮುಕ್ಕ, ಸುರತ್ಕಲ್ ನಲ್ಲಿ ನಡೆದಿದೆ.
ಸುರತ್ಕಲ್ ನಿವಾಸಿ ಜಲಜ (85 ) ಮಂಗಳೂರು ಠಾಣೆಗೆ ಬಂದು ದೂರು ನೀಡಿದ್ದು ಡಿ. 03 ರಂದು ಸುಮಾರು 02.30 ಗಂಟೆಗೆ ಅಪರಿಚಿತರು ಮನೆಯ ಬಾಗಿಲು ಬಡಿದು ಕುಡಿಯಲು ನೀರು ಬೇಕು ಬಾಗಿಲು ತೆರೆಯಿರಿ ಎಂದು ಹೇಳಿದ್ದು ಅದಕ್ಕೆ ಮನೆಯವರು ಬಾಗಿಲು ತೆಗೆಯದೇ ಇದ್ದುದರಿಂದ ಆರೋಪಿತರು ಮನೆಯ ಹಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಸುಮಾರು 4,43,000 ರೂ ಬೆಲೆ ಬಾಳುವ ಬಂಗಾರವನ್ನು ಲೂಟಿ ಹೊಡೆದ ಘಟನೆ ನಡೆದಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಠಾಣಾ ಪಿಎಸ್.ಐ ರಘು ನಾಯಕ, ರಾಘವೇಂದ್ರ ನಾಯ್ಕ್ ಹಾಗೂ ಸಿಬ್ಬಂದಿಯವರ ತಂಡ ಬಲೇ ಬಿಸಿದ್ದು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.ಪ್ರಕರಣದ ಜಾಡು ಹಿಡಿದ ಪೊಲೀಸರು ಶ್ರೀ ರಾಮ ಭಜನಾ ಮಂದಿರ, ಗೊಡ್ಡೆ ಕೊಪ್ಲ, ಸುರತ್ಕಲ್ ನಿವಾಸಿ ಶೈನ್ ಎಚ್. ಪುತ್ರನ್ (೨೧) ಎಂಬಾತನ್ನು ವಶಕ್ಕೆ ಪಡೆದು ವಿಚಾರಿಸಿದ್ದು ಆತ ಕಾರ್ಕಳ ನಿವಾಸಿ ಜೈಸನ್ ಲೆನ್ಸನ್ ನೊಂದಿಗೆ ಈ ಕೃತ್ಯ ನಡೆಸಿದ್ದು ಬಂಗಾರವನ್ನು ಬೆಂಗಳೂರಿಗೆ ಹೋಗಿ ಗಿರೀಶ್ ಎಸ್ ಮತ್ತು ವಿನೋದ್ ಕುಮಾರ್ ಎಂಬವರಿಗೆ ಮಾರಿದ ಬಗ್ಗೆ ತಿಳಿಸಿದ್ದಾನೆ.
ಈ ಬಗ್ಗೆ ಬೆಂಗಳೂರಿಗೆ ತೆರಳಿದ ಪೊಲೀಸರು ಎಲೆಚನಹಳ್ಳಿ ಬೆಂಗಳೂರು ನಿವಾಸಿ ಕೋತಿ ವಿನೋದ್ ಕುಮಾರ್ ಹಾಗೂ ಗಿರೀಶ್ ಸೈಕಲ್ ಗಿರಿ ಯನ್ನು ಡಿ.೧೪ ರಂದು ವಶಕ್ಕೆ ಪಡೆದು ಆರೋಪಿತರುಗಳಿಂದ ಕಳುವಾದ 4,43,000 ರೂ ಬೆಲೆ ಬಾಳುವ ಬಂಗಾರವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲನ್ನು, 3 ಮೊಬೈಲ್ ಗಳು ಹಾಗೂ 3,000 ನಗದನ್ನು ಮಹಜರು ಮುಖೇನ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯಾದ ಜೈಸನ್ ಯಾನೆ ಲೆನ್ಸನ್ ಕಾರ್ಕಳ ಎಂಬಾತನು ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಬಲೆಬೀಸಲಾಗಿದೆ.
ಆರೋಪಿ ಶೈನ್ ಎಚ್. ಶಯನ್ ಎಂಬಾತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗಾಂಜಾಸೇವನೆಯ 1 ಪ್ರಕರಣ ದಾಖಲಾಗಿದ್ದು . ವಿನೋದ್ ವಿನೋದ್ ಕುಮಾರ್ ಎಂಬಾತನ ಮೇಲೆ ಬೆಂಗಳೂರಿನ ಕೆ.ಎಸ್.ಲೇಔಟ್ ಠಾಣೆಯಲ್ಲಿ ರೌಡಿ ತೆರೆಯಲಾಗಿದೆ ಹಾಗೂ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 2 ಕೊಲೆ, 2 ಕೊಲೆಯತ್ನ, 4 ದರೋಡೆ, 1 ಬೆದರಿಕೆ, 1 ಗಾಂಜಾ ಮಾರಾಟ, 1 ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಸೈಕಲ್ ಗಿರಿ ಎಂಬತನ ಮೇಲೆ ಬೆಂಗಳೂರಿನ ಕಗ್ಗಲಿಪುರ ಠಾಣೆಯಲ್ಲಿ ರೌಡಿ ತೆರೆಯಲಾಗಿದ್ದು ಹಾಗೂ ಬೆಂಗಳೂರು ನಗರದ ವಿವಿಧ ಠಾಣೆಯಲ್ಲಿ 5 ಕೊಲೆಯತ್ನ, 1 ದರೋಡೆ, 3 ಹಲ್ಲೆ ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನೂ ಡಿ.15 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


