ಮಂಗಳೂರು : ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ, ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂ ನಲ್ಲಿ ಜೂನ್ 7ರಿಂದ 13ರವರೆಗೆ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಸಾಮುದಾಯಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮವು ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಶರದಸ್ವಾಮಿ ಶಿವೂರಕರ ಅವರ ನೇತೃತ್ವದಲ್ಲಿ ನಡೆಯಲಿದ್ದು, ಪರಮಪೂಜ್ಯ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ ಮಹಾರಾಜ ಅವರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಪ್ರಾರಂಭವು ಜೂನ್ 7ರಂದು ಅಧಿಕ ಜ್ಯೇಷ್ಠ ಬಹುಳ ಸಪ್ತಮಿಯಂದು ನಡೆಯಲಿದ್ದು, ಮಹಾಮಂಗಳೋತ್ಸವವು ಜೂನ್ 13ರಂದು ಅಧಿಕ ಜ್ಯೇಷ್ಠ ಬಹುಳ ತ್ರಯೋದಶಿಯಂದು ನೆರವೇರಲಿದೆ. ಈ ಅವಧಿಯಲ್ಲಿ ಅಖಂಡ ಹರಿನಾಮ ಸಂಕೀರ್ತನೆ, ಜ್ಞಾನೇಶ್ವರಿ ಪಾರಾಯಣ, ಪ್ರವಚನಗಳು ಹಾಗೂ ಕೀರ್ತನೆಗಳ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಪ್ರಥಮ ಬಾರಿಗೆ ಶ್ರೀ ಚೈತನ್ಯ ಸದ್ಗುರು ಶರಣ್ ಸ್ವಾಮಿ ಹರಿಭಾವು ಶಿವೂರಕರ ಬಹುಉದ್ದೇಶೀಯ ಸಂಸ್ಥೆಯ ವತಿಯಿಂದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಗ್ರಂಥದ ವಿಶೇಷ ಆವೃತ್ತಿಯ ಬಿಡುಗಡೆ ಕೂಡ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲ್, ರಮಾನಾಥ ರೈ, ಹರೀಶ್ ಪೂಂಜಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಜೂನ್ 2026ರಲ್ಲಿ ನಡೆಯುತ್ತಿರುವ ಅಧಿಕ ಜ್ಯೇಷ್ಠ ಮಾಸವು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದ್ದು, ಈ ಅವಧಿಯಲ್ಲಿ ಪಾರಾಯಣ, ಜಪ, ಧ್ಯಾನ ಹಾಗೂ ಭಕ್ತಿಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಪುಣ್ಯಫಲ ದೊರೆಯುತ್ತದೆ ಎಂದು ಹಿಂದೂ ಪಂಚಾಂಗಗಳು ಉಲ್ಲೇಖಿಸಿವೆ.
ಆಯೋಜಕರು ಜಿಲ್ಲೆಯ ಹಾಗೂ ರಾಜ್ಯದ ಭಕ್ತಾದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಹರಿಪ್ರಸಾದ್ ಮಹಾರಾಜ್ , ಆರ್. ಟಿ ಪಾಟೀಲ್ , ಅಧ್ಯಕ್ಷರು ,ತೇಜಪ್ಪ ಮಹಾರಾಜ್ , ವಿನೋದ್ ಕುಮಾರ್ . ರಮೇಶ್ ಹಕ್ಕೇರಿ ಯವರು ಉಪಸ್ಥಿತರಿದ್ದರು.


