ಮಂಗಳೂರು : ಆನ್ಲೈನ್ ಮೂಲಕ ಔಷಧ ಮಾರಾಟಕ್ಕೆ ದೇಶವ್ಯಾಪಿ ವಿರೋಧ ವ್ಯಕ್ತವಾದ ಹಿನ್ನೆಲೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂದು ಮೆಡಿಕಲ್ ಸ್ಟೋರ್ಗಳು ಬಂದ್ಗೆ ಬೆಂಬಲ ಸೂಚಿಸಿವೆ. All India Organisation of Chemists and Druggists ಕರೆ ನೀಡಿದ 24 ಗಂಟೆಗಳ ಔಷಧ ಮಳಿಗೆ ಬಂದ್ಗೆ Karnataka Chemists and Druggists Association ಸಂಪೂರ್ಣ ಬೆಂಬಲ ನೀಡಿದೆ.
ಮಂಗಳೂರಿನ ಹೃದಯ ಭಾಗದಲ್ಲಿರುವ ಗಣೇಶ್ ಮೆಡಿಕಲ್ ಹಾಗೂ ರಾಧಾ ಮೆಡಿಕಲ್ ಸೇರಿದಂತೆ ಹಲವು ಮೆಡಿಕಲ್ ಸ್ಟೋರ್ಗಳು ಬಂದ್ನಲ್ಲಿ ಭಾಗವಹಿಸಿವೆ.
ಜಿಎಸ್ಆರ್ 817 ಮತ್ತು 220 ಆದೇಶಗಳನ್ನು ಹಿಂಪಡೆಯುವಂತೆ ಔಷಧ ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಆನ್ಲೈನ್ ಮೂಲಕ ನಕಲಿ ಪ್ರಿಸ್ಕ್ರಿಪ್ಷನ್ ಬಳಕೆ ಹೆಚ್ಚುತ್ತಿರುವುದು, ಕೃತಕ ಬುದ್ಧಿಮತ್ತೆ (AI) ಬಳಸಿ ನಕಲಿ ವೈದ್ಯರ ಚೀಟಿಗಳನ್ನು ಸೃಷ್ಟಿಸಲಾಗುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ನಾರ್ಕೋಟಿಕ್ ಔಷಧಗಳ ದುರುಪಯೋಗವೂ ಹೆಚ್ಚುತ್ತಿದ್ದು, ನಿಯಂತ್ರಣವಿಲ್ಲದ ಆನ್ಲೈನ್ ಔಷಧ ಮಾರಾಟ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ. ಆನ್ಲೈನ್ ಔಷಧ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೊಳಿಸುವಂತೆ ಆಗ್ರಹಿಸಿರುವ ಔಷಧ ವ್ಯಾಪಾರಿಗಳು, ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


