Thursday, March 12, 2026
Flats for sale
Homeರಾಜ್ಯಹೊಸನಗರ : ಅರಣ್ಯ ಇಲಾಖೆಯಿಂದ ಮಲೆನಾಡಿನ ಜನರಿಗೆ ದಬ್ಬಾಳಿಕೆ ; ಕೆಡಿಪಿ ಸಭೆಯಲ್ಲಿ ಶಾಸಕದ್ವಯರ ಅಸಮಧಾನ.

ಹೊಸನಗರ : ಅರಣ್ಯ ಇಲಾಖೆಯಿಂದ ಮಲೆನಾಡಿನ ಜನರಿಗೆ ದಬ್ಬಾಳಿಕೆ ; ಕೆಡಿಪಿ ಸಭೆಯಲ್ಲಿ ಶಾಸಕದ್ವಯರ ಅಸಮಧಾನ.

ಹೊಸನಗರ: ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಃ ಕಾರಣ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಲಯ ಅರಣ್ಯಾಧಿಕಾರಿಗಳನ್ನು ಶಾಸಕಾದ್ವಯರಾದ ಆರಗ ಜ್ಞಾನೇಂದ್ರ ಹಾಗೂ ಬೇಳೂರು ಗೋಪಾಲಕೃಷ್ಣ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಖಾಸಗಿ ಒತ್ತುವರಿಯಷ್ಟೇ ಅಲ್ಲದೇ ಇತ್ತೀಚೆಗೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಕಾಮಗಾರಿ ನಡೆಸಲೂ ಅಡ್ಡಿ ಪಡಿಸಲಾಗುತ್ತಿದೆ. ರಸ್ತೆ, ಸೇತುವೆ, ಟ್ಯಾಂಕ್, ಮೊಬೈಲ್ ಟವರ್‌ ಕಟ್ಟಲೂ ಬಿಡುತ್ತಿಲ್ಲ. ಕಾಡಿನಲ್ಲಿ ಹಳ್ಳಿ ಜನ ಹೆಣ ಸುಡಲೂ ಬಿಡದಂತೆ ಕಾಡುತ್ತಿದ್ದೀರಿ. ಇಂತಹ ಪರಿಸ್ಥಿತಿ ಆದಲ್ಲಿ ಮಲೆನಾಡಿನ ಜನರು ಬದುಕುವುದು ಹೇಗೆ ಎಂದು ಶಾಸಕರಿಬ್ಬರೂ ಅರಣ್ಯಾಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಆಗಾಗ್ಗೆ ಮಳೆಯಾಗುತ್ತಿರುವ ಕಾರಣಕ್ಕೆ ತಾಲೂಕಿನಲ್ಲಿ ಹೆಚ್ಚಿನ ಭತ್ತದ ಬೆಳೆ ಹಾಳಾಗಿಲ್ಲ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ, ಭತ್ತದ ಫಸಲು ರೈತರ ಕೈ ಸೇರುವವರೆಗೆ ಕೃಷಿ ಪಂಪ್‌ಗಳಿಗೆ ದಿನಕ್ಕೆ ಕನಿಷ್ಠ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡುವಂತೆ ಶಾಸಕರು ಮೆಸ್ಕಾಂ ಅಧಿಕಾರಿಯನ್ನು ಸೂಚಿಸಿದರು. ಅಲ್ಲದೇ ಪರಿವರ್ತಕಗಳು ಹಾಳಾದಲ್ಲಿ 24 ಗಂಟೆಯ ಒಳಗಾಗಿ ಬದಲಾವಣೆ ಮಾಡಬೇಕು ಎಂದು ಅವರು ಸೂಚಿಸಿದರು.

ಶಿಥಿಲಗೊಂಡ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಬೇಡಿ. ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂದು ಬಿಇಓ ಕೃಷ್ಣಮೂರ್ತಿಅವರಿಗೆ ತಿಳಿಸಿದರು. ಕೆಲ ಶಾಲೆಗಳಲ್ಲಿ ಮಕ್ಕಳು ಕೊಠಡಿ ಕೊರತೆಯಿಂದ ರಂಗಮಂದಿರದಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಈಗಾಗಲೇ ಕೈಗೆತ್ತಿಕೊಂಡಿರುವ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಅಕ್ರಮ ಮದ್ಯ ಮಾರಾಟದಿಂದ ಯುವ ಜನತೆ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಅಬಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಶಾಸಕದ್ವಯರು ಅಬಕಾರಿ ಅಧಿಕಾರಿಗಳ ವಿರುದ್ಧ ಆರೋಪಿಸಿದರು.

ಅಕ್ರಮ ಗೋ ಸಾಗಾಣಿಕೆ, ಗಾಂಜಾ ಪ್ರಕರಣ, ಜೂಜು ಮೊದಲಾದ ಕಾನೂನು ಬಾಹಿರ ಕೃತ್ಯಗಳು ತಾಲೂಕಿನಲ್ಲಿ ಎಲ್ಲೇ ನಡೆಯುತ್ತಿದ್ದರೂ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ನೈತಿಕ ಪೊಲೀಸ್ ಗಿರಿ ನಡೆಸಲು ಅವಕಾಶ ನೀಡಬೇಡಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸಿಪಿಐ ಗುರಣ್ಣ ಹೆಬ್ಬಾಳ್ ಅವರಿಗೆ ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಇನ್ನೂ ಸಾವಿರಾರು ಮಹಿಳೆಯರಿಗೆ ಹಣ ಜಮಾ ಆಗದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಬಿಟ್ಟು ಹೋಗಿರುವ ಇಂತಹ ಫಲಾನುಭವಿಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆ ಬಗೆಹರಿಸಿ, ಅವರಿಗೂ ಹಣ ಜಮಾ ಆಗುವಂತೆ ನೋಡಿಕೊಳ್ಳಲು ಸಿಡಿಪಿಓ ಅವರಿಗೆ ಸೂಚಿಸಿದರು.

ಸುಮಾರು 20 ಇಲಾಖೆಗಳ ಅಧಿಕಾರಿಗಳು, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಪಿಡಿಓಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಕೆಲವು ಅಧಿಕಾರಿಗಳು ಸಭೆಗೆ ಸೂಕ್ತವಾದ ಮಾಹಿತಿ ನೀಡದೇ ಇದ್ದದ್ದೂ ವಿಪರ್ಯಸವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular