ಹುಬ್ಬಳ್ಳಿ : ಕೀಟನಾಶಕ ಸಿಂಪಡಿಸಿದ ನಂತರ ಕೈ ತೊಳೆಯಲು ಮರೆತು ಆಹಾರ ಸೇವಿಸಿ ಅರಣ್ಯಾಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೃತರನ್ನು ಕುಮಟಾ ತಾಲೂಕಿನ ಬಾಡ ಗ್ರಾಮದ ನಿವಾಸಿ ಅರಣ್ಯಾಧಿಕಾರಿ ಯೋಗೇಶ್ ನಾಯಕ್ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ವಿರ್ನೋಳಿ ವಿಭಾಗದ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾಯಕ್ ಅವರು ಜೂನ್ 27 ರಂದು ತೇಗದ ತೋಟದಲ್ಲಿ ಕಳೆ ಮತ್ತು ಕೀಟಗಳನ್ನು ತೆರವುಗೊಳಿಸಲು ಕೀಟನಾಶಕ ಸಿಂಪಡಿಸಿದ್ದರು, ನಂತರ ಅವರು ಕೈ ತೊಳೆಯಲು ಮರೆತು ಮಧ್ಯಾಹ್ನದ ಊಟವನ್ನು ಸೇವಿಸಿದ್ದಾರೆ. ಮನೆಗೆ ಹಿಂದಿರುಗಿದ ನಂತರ ಅಧಿಕಾರಿಯು ಮರುದಿನ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.
ಅವರು ಖಾಸಗಿ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ, ರೋಗಲಕ್ಷಣಗಳು ಕಡಿಮೆಯಾಗದಿದ್ದಾಗ, ನಾಯಕ್ ಹುಬ್ಬಳ್ಳಿಗೆ ಬಂದು ಆಸ್ಪತ್ರೆಗೆ ದಾಖಲಾಗಿದ್ದರು.
ತಪಾಸಣೆಯ ವೇಳೆ ಅವರ ದೇಹದ ಪ್ರಮುಖ ಅಂಗಗಳಾದ ಮೂತ್ರಪಿಂಡ, ಯಕೃತ್ತು ಮತ್ತು ಶ್ವಾಸಕೋಶಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ ಎಂದು ಮೂಲಗಳು ಹೇಳಿವೆ. ನಂತರ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಆದರೆ ಆ ವೇಳೆಗೆ ನಾಯಕ್ ಕೋಮಾಗೆ ಜಾರಿದರು. ಕುಟುಂಬಸ್ಥರು ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಜುಲೈ 7 ರಂದು ಅಧಿಕಾರಿ ಸೋಂಕಿಗೆ ಬಲಿಯಾಗಿದ್ದಾರೆ. ಅವತು ಪತ್ನಿ ಮತ್ತು ತಮ್ಮ ಮಗುವನ್ನು ಅಗಲಿದ್ದಾರೆ.
ಪೊಲೀಸರು ತನಿಖೆ ಕೈಗೊಂಡಿದ್ದು, ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.