ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತ ಪರ್ವತಶ್ರೇಣಿಯಲ್ಲಿ ಚಾರಣ ಪ್ರಿಯರು ಈ ವಾರದಲ್ಲಿ ಸರಣಿ ರಜೆ ಇರುವ ಕಾರಣ ಶುಕ್ರವಾರ ಸಾಕಷ್ಟು ಸಂಖ್ಯೆಯಲ್ಲಿ ಚಾರಣಿಗರು ಆಗಮಿಸಿದ್ದಾರೆ ಆದರೆ ಈ ಬಾರಿ ಜನಸಾಗರವೇ ಹರಿದು ಬಂದು ನಿಂತಿದ್ದು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತ ಚಾರಣಿಗರ ಚಿತ್ರಣ ವೈರಲ್ ಆಗಿದೆ.
ಚಾರಣ ಪ್ರಿಯರ ಜೊತೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಗಳಲ್ಲಿಯೂ ಭಕ್ತರ ದಂಡು ಹರಿದು ಬಂದಿತ್ತು.
ವರ್ಷದ ಈ ಸಮಯವು ಕುಮಾರ ಪರ್ವತ ಪರ್ವತ ಶ್ರೇಣಿಯನ್ನು ಅನ್ವೇಷಿಸಲು ಉತ್ಸುಕರಾಗಿರುವ ಚಾರಣಿಗರನ್ನು ಆಕರ್ಷಿಸುತ್ತದೆ. ದೇವರಗದ್ದೆಯ ಪ್ರವೇಶ ದ್ವಾರದ ಬಳಿ ಗಣನೀಯ ಪ್ರಮಾಣದ ಜನಸಂದಣಿ ಕಂಡುಬಂದಿದ್ದು, ಅರಣ್ಯ ಅಧಿಕಾರಿಗಳು ಪ್ರತಿ ಚಾರಣಿಗರನ್ನು ತಪಾಸಣೆ ನಡೆಸಿ ಅವರಿಗೆ ಮುಂದುವರೆಯಲು ಅವಕಾಶ ನೀಡಿದರು. ಶನಿವಾರ ಮತ್ತು ಭಾನುವಾರ ಹೆಚ್ಚಿನ ಚಾರಣಿಗರು ಆಗಮಿಸುವ ನಿರೀಕ್ಷೆಯಿದೆ.


