ಸುಳ್ಯ : ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಸರಕಾರ ಆದೇಶ ಹೊರಡಿದ್ದು, ವಿಶೇಷವೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವಾಗಲೇ ಸುಳ್ಯದಲ್ಲಿ ಇದು ಬಿಜಿಪಿಗೆ ಒಲಿದಿದೆ ಎಂದು ತಿಳಿದು ಬಂದಿದ್ದು,ಇದು ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ರಾಜ್ಯ ಸರ್ಕಾರದಿಂದ ಹೊರಡಿಸಲಾಗಿದೆ ಎನ್ನಲಾದ ಅಧಿಸೂಚನೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷರಾಗಿ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅರಂತೋಡಿನ ಬಿಜೆಪಿ ನಾಯಕಿ ಶ್ರೀಮತಿ ಭಾರತಿ ಪುರುಷೋತ್ತಮ, ನ್ಯಾಯವಾದಿ ಜಗದೀಶ್ ಡಿ.ಪಿ.ಯವರನ್ನು ನೇಮಿಸಿರುವ ಆದೇಶ ಪ್ರತಿ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದೆ. ಈ ಆದೇಶ ಪ್ರತಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಇಲ್ಲಿನ ಕಾಂಗ್ರೆಸ್ ವಲಯದ ಮುಖಂಡರು ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದು, ಈ ಆದೇಶಕ್ಕೆ ತಡೆ ನೀಡಿ ಹೊಸ ಕಾಂಗ್ರೆಸ್ ಬೆಂಬಲಿತ ಹೊಸ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸುವಂತೆ ಮನವಿ ಮಾಡಿಕೊಂಡರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು, ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರಿದ್ದಾರೋ ಅವರು ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ ಮತ್ತು ಇಲ್ಲಿ ಕಾಂಗ್ರೆಸ್ ಬೆಂಬಲಿತರು ಸಮಿತಿಯ ಸದಸ್ಯರಾಗುತ್ತಾರೆ. ಒಂದು ವೇಳೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಅಕ್ರಮ ಸಕ್ರಮ ಸಮಿತಿ ರಚನೆಯಾದರೆ ಇನ್ನೊಂದಕ್ಕೆ ಸಹಾಯಕ ಕಮಿಷನರ್ ಅಧ್ಯಕ್ಷರಾಗಿರುತ್ತಾರೆ. ಅಕ್ರಮ ಸಕ್ರಮ ಸಮಿತಿಗೆ ಸದಸ್ಯರ ಹೆಸರುಗಳನ್ನು ಕಳುಹಿಸಿಕೊಡುವಂತೆ ಸರಕಾರದಿಂದ ಆಯಾ ಭಾಗದ ಮುಖ್ಯ ತಾಲೂಕು ಅಧಿಕಾರಿಗಳಿಗೆ ಸುತ್ತೋಲೆ ಬರುತ್ತದೆ. ಅದರಂತೆ ಸುಳ್ಯ, ಕಡಬ, ಪುತ್ತೂರು ಮತ್ತಿತರ ತಾಲೂಕುಗಳ ಅಧಿಕಾರಿಗಳಿಗೂ ಈ ಸುತ್ತೋಲೆ ಬಂದಿದ್ದು, ಕಡಬದ ಅಧಿಕಾರಿಗಳು ರಾಜಕೀಯ ಪ್ರೇರಿತರಾಗಿ ಶಾಸಕಿ ಭಾಗೀರಥಿ ಮುರುಳ್ಯರವರೊಡನೆ ಸಮಾಲೋಚಿಸಿ, ಅವರು ಕೊಟ್ಟ ಹೆಸರುಗಳನ್ನು ರಾಜ್ಯ ಸರಕಾರಕ್ಕೆ ಕಳುಹಿಸಿದ್ದಾರೆ. ನಾವು ಪಟ್ಟಿ ಕಳುಹಿಸುವಾಗ ತಡವಾಗಿತ್ತೆಂದು ಹೇಳಲಾಗಿದ್ದು,ನಾವು ತಡ ಮಾಡಿಲ್ಲ.ಸುಳ್ಯ ವಿಧಾನ ಸಭಾ ಕ್ಷೇತ್ರ ದೊಡ್ಡ ಭೌಗೋಳಿಕ ಪ್ರದೇಶ. ಇಲ್ಲಿ ಕಡಬಕ್ಕೆ ಪ್ರತ್ಯೇಕ ಸಮಿತಿ ಸದಸ್ಯರು ಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬ ಆಗಿದೆ.ಆದರೆ ಅಧಿಕಾರಿಗಳ ಮಟ್ಟದಲ್ಲಿ ಕಳುಹಿಸಿದ ಪಟ್ಟಿ ಮಂಜೂರಾತಿಗೊಂಡು ಆದೇಶವಾಯಿತೆಂದು ಹೇಳಲಾಗುತ್ತಿದೆ. ಇದಕ್ಕೆ ತಡೆ ತರುತ್ತೇವೆ. ಆಯಾ ಜಿಲ್ಲೆಯ ಉಸ್ತುವಾರಿ ಸಚಿವರ ಮೂಲಕ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಪಟ್ಟಿ ಸರಕಾರಕ್ಕೆ ಕಳುಹಿಸಬೇಕು.ಆದರೆ ಇಲ್ಲಿ ಇದು ಪಾಲನೆ ಮಾಡದೇ ಶಾಸಕರ ಮತ್ತು ಅಧಿಕಾರಿಗಳ ಹಿತಾಸಕ್ತಿ ಮೇಲೆ ಸಲ್ಲಿಸಲಾಗಿದೆ.ಇದು ಸರಿಯಾದ ಪ್ರಕೃಿಯೆ ಅಲ್ಲ.ಕೂಡಲೇ ಬೇರೆ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.


