ಶಿವಮೊಗ್ಗ : ಲಾಂಚ್ ನಿಂದ ಹೊರ ಬಂದ ಖಾಸಗಿ ಬಸ್ ದಿಡೀರ್ ಎಂದು ಹಿನ್ನೀರಿನ ಕಡೆ ಚಲಿಸುತ್ತಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸಿಗಂದೂರಿನಿಂದ ಸಾಗರಕ್ಕೆ ಮರಳುತ್ತಿದ್ದ ಖಾಸಗಿ ಬಸ್ ಲಾಂಚ್ನ ಲಂಗರಿನಿಂದ ಹೊರಬಿದ್ದು ದಡದತ್ತ ಚಲಿಸುವ ಸಂದರ್ಭದಲ್ಲಿ ಏಕಾಏಕಿ ಇಂಜಿನ್ ಆಫ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿನತ್ತ ಹಿಮ್ಮಖವಾಗಿ ಚಲಿಸಲು ಆರಂಭಿಸಿತ್ತು, ಅದೃಷ್ಟವಶಾತ್ ಯಾವುದೇ ಅನಾಹುತಗಳಾಗದೆ ಪಾರಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಭಾನುವಾರ ಸಂಜೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳನ್ನು ತುಂಬಿಕೊಂಡು ಹೊರಟಿದ್ದ ಇಲ್ಲಿನ ಗಜಾನನ ಬಸ್ ಕಿಕ್ಕಿರಿದು ತುಂಬಿತ್ತು. ಲಾಂಚ್ನೊಳಗಿದ್ದಾಗಲೂ ಬಸ್ ಪ್ರಯಾಣಿಕರು ಕೆಳಗಿಳಿದಿರಲಿಲ್ಲ. ಹೀಗೆ ಜನರನ್ನು ತುಂಬಿಕೊಂಡೇ ಲಾಂಚ್ನಿಂದ ಶರಾವತಿ ಹಿನ್ನೀರಿನ ಅಂಬಾರಗೋಡ್ಲು ದಡದಲ್ಲಿ ಡಾಂಬಾರು ರಸ್ತೆಯತ್ತ ತೆರಳುತ್ತಿದ್ದ ಬಸ್ನ ಇಂಜಿನ್ ಇದ್ದಕ್ಕಿದ್ದಂತೆ ಆಫ್ ಆಗಿದೆ.
ಏರುಮುಖದಲ್ಲಿದ್ದ ಬಸ್ ಈ ಹಂತದಲ್ಲಿ ನಿಯಂತ್ರಣ ಕಳೆದುಕೊಂಡು ಮತ್ತೆ ಶರಾವತಿ ಹಿನ್ನೀರಿನತ್ತ ಚಲಿಸಲಾರಂಭಿಸಿದೆ. ಇದು ಬಸ್ನೊಳಗಿದ್ದ ಪ್ರಯಾಣಿಕರನ್ನು ಆತಂಕಕ್ಕೆ ಈಡುಮಾಡಿದೆ. ಆದರೆ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬಸ್ನ್ನು ದಡದಲ್ಲಿ ಅಡ್ಡಲಾಗಿ ತಿರುಗಿಸಿದ್ದರಿಂದ ಬಸ್ ನಿಯಂತ್ರಣಕ್ಕೆ ಬಂದಿದೆ.ನಂತರ ಬಸ್ ಸಾಗರಕ್ಕೆ ಯಾವುದೇ ಸಮಸ್ಯೆಯಿಲ್ಲದೆ ತೆರಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


