ಶಿವಮೊಗ್ಗ : ಶಿವಮೊಗ್ಗ ಭಾಗದಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. ಟ್ರಾಕ್ ಮೇಲಿನ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಹಿನ್ನೆಲೆ ಹಲವು ರೈಲುಗಳು ಗಂಟೆಗಳ ಕಾಲ ನಿಂತಲ್ಲೇ ನಿಂತ ಘಟನೆ ನಡೆದಿದೆ.
ಭದ್ರಾವತಿ ತಾಲೂಕಿನ ಸಮೀಪ ಟ್ರಾಕ್ ಮೇಲೆ ಮರ ಬಿದ್ದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಂಚರಿಸುವ ಜನಶತಾಬ್ದಿ ಮತ್ತು ಇಂಟರ್ಸಿಟಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನೊಂದು ರೈಲು ತರಿಕೆರೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿಂತಿದ್ದು, ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.
ರೈಲುಗಳು ದೀರ್ಘಕಾಲ ನಿಂತ ಹಿನ್ನೆಲೆ ಕೆಲ ಪ್ರಯಾಣಿಕರು ಲಗೇಜ್ ಹೊತ್ತುಕೊಂಡೇ ಬಸ್ಗಳ ಮೂಲಕ ಮುಂದಿನ ಪ್ರಯಾಣ ಕೈಗೊಂಡ ದೃಶ್ಯಗಳು ಕಂಡುಬಂದವು. ಮರ ತೆರವು ಕಾರ್ಯಾಚರಣೆಯನ್ನು ರೈಲ್ವೆ ಸಿಬ್ಬಂದಿ ಕೈಗೊಂಡಿದ್ದು, ಬಳಿಕ ಸಂಚಾರ ಪುನಾರಂಭಿಸಿದ್ದಾರೆ.


