ಮುಂಬೈ : ಅಸಮರ್ಪಕ ಕಂಪನಿ ಆಡಳಿತ. ಇಂಥದೊಂದು ಸಮಸ್ಯೆ ಹಲವಾರು ಕಂಪನಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದೀಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸರದಿ. ಇಲ್ಲಿ ನಡೆದ ಹಲವು ಅವ್ಯವಹಾರಗಳ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಕಾರ್ಯಾಚರಣೆ ಸ್ಥಗಿತಗೊಳಿಸಲು ಆರ್ಬಿಐ ನೀಡಿದ ಡೆಡ್ಲೈನ್ ಮುಕ್ತಾಯಗೊಂಡಿದೆ. ಮಾ.15 ರ ನಂತರ ಪೆಟಿಎಂ ಮತ್ತು ಮಾತೃಸಂಸ್ಥೆ ಒನ್ 97 ಕಮ್ಯುನಿಕೇಶನ್ಸ್ ಕಂಪನಿಯ ಭವಿಷ್ಯದ ಚಿಂತೆಯೂ ಇಲ್ಲಿ ಉದ್ಭವವಾಗಿದೆ. ಈ ಬಿಕ್ಕಟ್ಟಿನಿಂದಾಗಿ ದೇಶೀಯ ಫಿನ್ಟೆಕ್ ಉದ್ಯಮದಲ್ಲಿನ ಕೆಲವು ಲೋಪದೋಷಗಳು ಬಯಲಿಗೆ ಬಂದಂತಾಗಿದೆ.
ಆದರೆ ನ್ಯಾಶನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ನೀಡಿದ ಪರವಾನಿಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆ ಎಂಬAತಾಗಿದೆ. ಇತ್ತೀಚೆಗೆ ಥರ್ಡ್ ಪಾರ್ಟಿ ಆ್ಯಪ್ ಪ್ರೊವೈಡರ್ ಲೈಸೆನ್ಸ್ ನೀಡಿದ್ದು, ತಕ್ಕ ಮಟ್ಟಿಗೆ ಉಸಿರಾಡುವಂತಾಗಿದೆ. ಇದರಿಂದ ಪೇಟಿಎಂ ಮೂಲಕ ಯುಪಿಐ ಸೇವೆಗೆ ಯಾವುದೇ ಬಾಧಕವಿಲ್ಲ. ಇದರಡಿಯಲ್ಲಿ ಬೇರೆ ಬ್ಯಾಂಕುಗಳ ಸಹಯೋಗದೊಂದಿಗೆ ಸೇವೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ರಘುರಾಮ್ ರಾಜನ್ ಅವರು ಆರ್ಬಿಐ ಗವರ್ನರ್ ಇದ್ದಾಗ ಪೇಮೆಂಟ್ಸ್ ಬ್ಯಾಂಕ್ ಪರಿಕಲ್ಪನೆಗೆ ಚಾಲನೆ ನೀಡಲಾಯಿತು. ಇಲ್ಲಿ ಸಮಸ್ಯೆ ಏನೆಂದರೆ ಇಂಥ ಬ್ಯಾಂಕುಗಳು ಠೇವಣಿ ಸಂಗ್ರಹಿಸಬಹುದೇ ವಿನಃ ಸಾಲ ನೀಡಲು ಅನುಮತಿ ಇಲ್ಲ. ಹೀಗಾಗಿ ಠೇವಣಿ ಸಂಗ್ರಹದ ವೆಚ್ಚವನ್ನು ಭರಿಸುವುದು ಕಷ್ಟವಾಗುತ್ತದೆ. ಜೊತೆಗೆ ಸಾಕಷ್ಟು ಪ್ರಮಾಣದ ಕಪ್ಪು ಹಣವನ್ನು ಇಲ್ಲಿ ಠೇವಣಿಯಾಗಿ ಇಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ತನ್ಮೂಲಕ ಮನಿ ಲ್ಯಾಂಡೇರಿಂಗ್ ನಂತಹ (ವಿದೇಶಗಳಿಗೆ ಅಕ್ರಮ ಹಣ ವರ್ಗಾವಣೆ) ಅಪರಾಧ ಚಟುವಟಿಕೆಗೂ ಆಸ್ಪದ ನೀಡಿದಂತಾಗಿದೆ ಎನ್ನಲಾಗಿದೆ.
ಸಮರ್ಪಕವಾದ ಅಸೆಟ್-ಲಯಾಬಿಲಿಟಿ ಮ್ಯಾನೇಜ್ಮೆಂಟ್ ಇಲ್ಲದೇ ಬ್ಯಾಲನ್ಸ್ಶೀಟ್ ನಿರ್ವಹಣೆಯಲ್ಲೂ ಅಪರಾತಪರಾ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಪೇಮೆಂಟ್ಸ್ ಬ್ಯಾಂಕುಗಳ ಆಡಳಿತ, ಬ್ಯುಸಿನೆಸ್ ಮಾಡೆಲ್ನಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕೆಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ.


