ಮಾಗಡಿ : ವರುಣನ ಆಗಮನಕ್ಕಾಗಿ ಚಿಲೂರು ಗ್ರಾಮಸ್ಥರು ಮಳೆರಾಯನ ಮೂರ್ತಿ ತಯಾರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾಲೂಕಿನ ಚಿಲೂರು ಗ್ರಾಮದ ಯುವಕರು ಮಣ್ಣಿನಿಂದ ಮಳೆರಾಯನ ಮೂರ್ತಿ ತಯಾರಿಸಿ
ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಗ್ರಾಮಸ್ಥರಿಂದ ಮಳೆರಾಯನ ಮೂರ್ತಿ ಮೇಲೆ ನೀರು ಹಾಕಿಸಿಕೊಂಡು ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗ್ರಾಮದ ಹೊರಭಾಗದ ಪ್ರಕಾಶ್ ಎಂಬುವರ ಜಮೀನಿನಲ್ಲಿ ಮಳೆರಾಯನ
ಮೂರ್ತಿ ಇಟ್ಟು ಭಿನ್ನಮಾಡಿದ್ದಾರೆ.
ಇದೇ ವೇಳೆ ಗ್ರಾಮದ ಯುವಕ ಕುಮಾರು ಮಾತನಾಡಿ, ರೈತರು ಸಾಲಸೂಲ ಮಾಡಿ ಜಮೀನನ್ನು ಅಸನು ಮಾಡಿ ರಾಗಿ ಭಿತ್ತನೆಮಾಡಿದ್ದು ಮಳೆ ಇಲ್ಲದೆ ರಾಗಿ ಮೊಳಕೆ ಹೊಡೆದಿಲ್ಲ ಇದರಿಂದ ರೈತನಿಗೆ ಶ್ರಮದ ಜೊತೆ ಹಣ ನಷ್ಟ ಉಂಟಾಗಿದೆ ಈ ಸಂಬಂಧ ಮಳೆಯಾಗಲಿ ಎಂದು ಗ್ರಾಮದ ಯುವಕರೆಲ್ಲರೂ ಸೇರಿ ಮಣ್ಣಿನಿಂದ ಮಳೆರಾಯನ ಮೂರ್ತಿ ತಯಾರಿಸಿ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಮಳೆರಾಯನ ಮೂರ್ತಿಗೆ ನೀರು ಹಾಕಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ. ಮಳೆ ಬಾರದ ವೇಳೆ ಇಂಥಹ ಸಂಪ್ರದಾಯ ತಲಾತಲಾಂತರದಿಂದ
ನಡೆಸಿಕೊಂಡು ಬರಲಾಗುತ್ತಿದೆ ಅದೇ ರೀತಿ ಈ ಭಾರಿಯೂ ಮಳೆರಾಯನ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು.
ನಾರಸಂದ್ರ ಧನುಷ್ ಮಾತನಾಡಿ, ಯಾವ ವರ್ಷದಲ್ಲಿ ಮಳೆ ಬರುವುದಿಲ್ಲ ಆ ವರ್ಷ ಪೂಜೆ ನಡೆಸುವುದು ವಾಡಿಕೆಯಾಗಿದೆ ಈ ಪೂಜೆ ನಡೆಸಿದ ಒಂದು ವಾರದ ಒಳಗೆ ಮಳೆ ಬರುತ್ತದೆ ಎಂಬುದು ಎಲ್ಲರ ನಂಭಿಕೆಯಾಗಿದ್ದು ಅದೇ ರೀತಿ ಮಳೆಬಂದಿದೆ, ಎಷ್ಟೆ ವೈಜ್ಞಾನಿಕತೆ ಬೆಳೆದರು ಮಳೆ ಬೀಳಿಸಲು ನಮ್ಮ ವಿಜ್ಞಾನಿಗಳು ಇನ್ನೂ ಮುಂದುವರೆದಿಲ್ಲ ಅದರೆ ಸಾಮಾನ್ಯ ರೈತರು ತಮ್ಮ ಸಂಪ್ರದಾಯದ ಮೂಲಕ ಮಳೆರಾಯನ ಆಗಮನಕ್ಕಾಗಿ ಭಕ್ತಿಯಿಂದ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ಇಂಥಹ ಆಚರಣೆಗಳು ಇಂದಿಗೂ ಜೀವಂತವಾಗಿದೆ ಎಂದರು.
ಗ್ರಾಮದ ಯುವಕರಾದ ಶಾಂತಕುಮಾರು, ಶಶಿಕುಮಾರು,ಶಶಿಕಿರಣ್, ಅರುಣ್, ಕಿರಣ್, ಅಣ್ಣಯ್ಯ, ಯತೀಶ್, ಪ್ರಕಾಶ್, ಮಹೇಶ್, ರುದ್ರೇಶ್, ಪಾಂಡೆ, ರಕ್ಷಿ ಇತರರು ಇದ್ದರು.


