ಮಂಗಳೂರು : ಹಿರಿಯ ಪತ್ರಕರ್ತ, ಸಂಯೋಜಕ, ಕಥೆಗಾರ ಮತ್ತು ಕವಿ ಮನೋಹರ್ ಪ್ರಸಾದ್ ಮಾರ್ಚ್ 1 ಶುಕ್ರವಾರ ಮುಂಜಾನೆ ನಿಧನರಾದರು, ಅವರಿಗೆ 64 ವರ್ಷ ವಯಸ್ಸಾಗಿತ್ತು.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನೋಹರ್ ಪ್ರಸಾದ್ ಅವರು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೂಲತಃ ಕಾರ್ಕಳ ತಾಲೂಕಿನ ಕರವಾಳು ಗ್ರಾಮದವರಾದ ಮನೋಹರ್ ಪ್ರಸಾದ್ ಅವರು ಮಂಗಳೂರಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿ ‘ನವ ಭಾರತ’ ಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಮಂಗಳೂರಿನಿಂದ ಉದಯವಾಣಿ ವರದಿಗಾರರಾಗಿ ಕೆಲಸಕ್ಕೆ ಸೇರಿದರು. ನಂತರ ಅವರು ಮುಖ್ಯ ವರದಿಗಾರರಾಗಿ, ನಂತರ ಬ್ಯೂರೋ ಮುಖ್ಯಸ್ಥರಾಗಿ ಮತ್ತು ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದರು.
ಸತತ 36 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅವರು ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾದರು.


