ಮಂಗಳೂರು : ಕದ್ರಿ ಕ್ರಿಕೆಟರ್ಸ್ ಕ್ಲಬ್ ಹಾಗೂ ಆಸರೆ ಫ್ರೆಂಡ್ಸ್ ಮಂಗಳೂರು ಇದರ ಜಂಟಿ ಆಯೋಜನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 11ನೇ ವರ್ಷದ ಅಕ್ಕಿ ವಿತರಣೆ ಕಾರ್ಯಕ್ರಮ ಆದಿತ್ಯವಾರ ಮುಂಜಾನೆ ಕದ್ರಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು, “ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಅಕ್ಕಿ ವಿತರಣೆ ಮಾಡುತ್ತಿರುವ ಸಂಘಟನೆಯ ಈ ಕಾರ್ಯ ದೇವರ ಕಾರ್ಯವಿದ್ದಂತೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಅವರು ಸಂತಸದಿಂದ ಹಬ್ಬವನ್ನು ಆಚರಿಸಲು ಅಕ್ಕಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಈ ಸಂಘಟನೆ ನೊಂದವರ ಕಣ್ಣೀರು ಒರೆಸುತ್ತಿದೆ. ಇನ್ನಷ್ಟು ಸಾಮಾಜಿಕ ಸೇವೆ ಮಾಡಲು ಭಗವಂತನ ಅನುಗ್ರಹವಿರಲಿ“ ಎಂದರು.
ಲಯನ್ ಕಿಶೋರ್ ಡಿ. ಶೆಟ್ಟಿ ಮಾತನಾಡಿ, ”ಸಾಮಾಜಿಕ ಧಾರ್ಮಿಕ ಸೇವೆಯಲ್ಲಿ ಸದಾ ಮುಂದಿರುವ ಕದ್ರಿ ಕ್ರಿಕೆಟರ್ಸ್ ಸಂಘಟನೆಯ ಈ ನಡೆ ಸ್ತುತ್ಯರ್ಹವಾದುದು. ಸಮಾಜದಲ್ಲಿ ಆರ್ಥಿಕ ಶ್ರೀಮಂತಿಕೆ ಇಲ್ಲದವರು ಬಡವರಲ್ಲ ಹೃದಯ ಶ್ರೀಮಂತಿಕೆ ಇಲ್ಲದವರು ಮಾತ್ರ ಬಡವರು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯಾರೂ ಮುಜುಗರ ಪಡಬೇಕಿಲ್ಲ“ ಎಂದರು.
ಸಂಘಟನೆಯಲ್ಲಿ ಸದಸ್ಯರಾಗಿದ್ದ ದಿ. ರಾಜೇಶ್ ಕೋಟ್ಯಾನ್ ಅವರ ಮನೆ ನಿರ್ಮಾಣಕ್ಕೆ ಕದ್ರಿ ಕ್ರಿಕೆಟರ್ಸ್ ಮುಂದಾಗಿದ್ದು ಮನೆಯ ನೀಲನಕ್ಷೆಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ರಾಮ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಲಯನ್ ಕಿಶೋರ್ ಡಿ. ಶೆಟ್ಟಿ, ಅಶೋಕ್ ಡಿ.ಕೆ., ಬಿಜೆಪಿ ಮುಖಂಡ ಫೆಡ್ರಿಕ್ ಪೌಲ್, ರಾಜ್ ಯಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಲ, ಸೂರಜ್ ಆಚಾರ್ಯ, ಬಿಲ್ಡರ್ ಲಕ್ಷ್ಮೀಶ್ ಭಂಡಾರಿ, ಕದ್ರಿ ಕ್ರಿಕೆಟರ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಸಾಲಿಯಾನ್, ಆಸರೆ ಫ್ರೆಂಡ್ಸ್ ಅಧ್ಯಕ್ಷ ದಿನೇಶ್, ಗೋಕುಲ್ ಕದ್ರಿ, ಪ್ರದೀಪ್ ಆಳ್ವ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.


