ಮಂಗಳೂರು : ಕುಖ್ಯಾತ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ನಿನ್ನೆ ತಡರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಕಲ್ಲಾಪು ಬಳಿ ಇರುವ ವಿ ಕೆ ಫರ್ನಿಚರ್ ಹಿಂಭಾಗದಲ್ಲಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಭೀಕರ ತಲವಾರು ದಾಳಿಯಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (35) ಎಂದು ಗುರುತಿಸಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಸಮೀರ್ ತನ್ನ ತಾಯಿಯೊಂದಿಗೆ ಕಲ್ಲಾಪುವಿನ ರೆಸ್ಟೋರೆಂಟ್ಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ರೆಸ್ಟೊರೆಂಟ್ ಪ್ರವೇಶಿಸಲು ಮುಂದಾಗುತ್ತಿದ್ದಂತೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ತಂಡ ಸಮೀರ್ ಹೊರಗೆ ಕಾಲಿಡುತ್ತಿದ್ದಂತೆಯೇ ಕತ್ತಿಯಿಂದ ಹಲ್ಲೆ ನಡೆಸಿದೆ. ಅಪಾಯವನ್ನು ಅರಿತುಕೊಂಡ ಸಮೀರ್ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು, ಆದರೆ ಐದು ಸದಸ್ಯರ ಗ್ಯಾಂಗ್ ಅವರನ್ನು ಸುಮಾರು 500 ಮೀಟರ್ ವರೆಗೆ ಹಿಂಬಾಲಿಸಿ, ಅಂತಿಮವಾಗಿ ಪೀಠೋಪಕರಣ ಶೋರೂಮ್ ಹಿಂದೆ ಬರ್ಬರ ಹತ್ಯೆ ಮಾಡಿದ್ದಾರೆ.
ಜೆಪ್ಪು ಕುಡುಪಾಡಿ ಮಸೀದಿ ಬಳಿ ಇರುವ ಫ್ಲಾಟ್ ನಲ್ಲಿ ಕುಖ್ಯಾತ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ಹತ್ಯೆ ನಡೆದಿತ್ತು ಇದಕ್ಕೆ ಪ್ರತಿಕಾರವಾಗಿ ಸಮೀರ್ ಹತ್ಯೆ ನಡೆದಿದೆ. ದಾವೂದ್, ಶಮೀರ್, ರಿಯಾಜ್, ನಮೀರ್, ಅಬ್ದುಲ್ ಖಾದರ್, ಉಮರ್ ನವಾಫ್, ಮೊಹಮ್ಮದ್ ನಜೀರ್ ಸೇರಿದಂತೆ ಜನರ ತಂಡದಿಂದ ಜೆಪ್ಪುವಿನ ಫ್ಲಾಟ್ನಲ್ಲಿ ಕೊಲೆಯಾದ ಯಲ್ಲಿ ಸಮೀರ್ ಪ್ರಮುಖ ಆರೋಪಿಯಾಗಿದ್ದ.ಆ ಪ್ರಕರಣದ ಎರಡನೇ ಆರೋಪಿ ಶಮೀರ್, ದಾವೂದ್ ಜೊತೆಗೆ ನೇರವಾಗಿ ಫ್ಲಾಟ್ಗೆ ನುಗ್ಗಿ ಇಲ್ಯಾಸ್ನನ್ನು ಹತ್ಯೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಮೀರ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ.
ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಉಳ್ಳಾಲ ಪೊಲೀಸರು ಕೊಲೆಯ ತನಿಖೆಯನ್ನು ಆರಂಭಿಸಿದ್ದಾರೆ.


