ಮಂಗಳೂರು : ಮಂಗಳೂರು ನಗರ ಹೊರವಲಯದ ಕಿನ್ನಿಗೋಳಿ ಸಮೀಪದ ಎಲತ್ತೂರಿನಲ್ಲಿ ಬೆಳಗ್ಗೆ ಹುಲ್ಲು ಕೊಯ್ಯಲು ತೆರಳಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದೆ.

ಕಳೆದೊಂದು ವಾರದಿಂದ ಈ ಭಾಗದ ನಿವಾಸಿಗಳು ಚಿರತೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದರು. ನವೆಂಬರ್ 3ರ ಭಾನುವಾರ ಬೆಳಗ್ಗೆ ಕಲ್ಕರೆ ನಿವಾಸಿ ಲಿಗೋರಿ ಎಂಬುವವರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿತ್ತು. ಇದರಿಂದ ಅವರ ಮುಖಕ್ಕೆ ಗಾಯಗಳಾಗಿವೆ. ಚಿರತೆ ದಾಳಿಯಿಂದ ಪಾರಾಗಲು ಲಿಗೋರಿ ಯಶಸ್ವಿಯಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಎಲತ್ತೂರು ಭಾಗದಲ್ಲಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಂದಿನ ಚಿರತೆ ದಾಳಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.


