ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ತಾವು ಮಾಡಿದ್ದೇ ನಿಯಮ, ಹೇಳಿದ್ದೇ ಕಾನೂನು ಎನ್ನುವ ರೀತಿಯಲ್ಲಿ ಈ ಮರಳುದಂಧೆಕೋರರು ವರ್ತಿಸುತ್ತಿದ್ದಾರೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಪರಾರಿ ಎಂಬಲ್ಲಿ ಹಿಟಾಚಿ ಬಳಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರನ್ನು ರೊಚ್ಚಿಗೆದ್ದ ಗ್ರಾಮಸ್ಥರು ಸೇರಿ ಅಟ್ಟಾಡಿಸಿ ಓಡಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ರಾತ್ರೋರಾತ್ರೇ ಹಿಟಾಚಿ ಹಾಗೂ ಟಿಪ್ಪರ್ ಬಳಸಿ ಸಮೀರ್ ಕಕ್ಕಿಂಜೆ ಎಂಬಾತ ಮರಳು ಸಂಗ್ರಹಿಸಲು ಆರಂಭಿಸಿದ್ದರು , ಈ ಬಗ್ಗೆ ಸ್ಥಳೀಯರು ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆ ಸಮೀರ್ ಕಕ್ಕಿಂಜೆ ತಾನು ಪೊಲೀಸರು ಹಾಗೂ ತಹಶೀಲ್ದಾರರಿಗೆ ಮಾಮೂಲು ಕೊಡುತ್ತಿರುವುದಾಗಿ ಹೇಳುತ್ತಿದ್ದನು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಸಮೀರ್ ಸಹಿತ ಕಾರ್ಮಿಕರನ್ನು ಅಟ್ಟಾಡಿಸಿದ್ದಾರೆ. ಸ್ಥಳೀಯರ ಆಕ್ರೋಶಕ್ಕೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ತಂಡವು ದಿಕ್ಕಾಪಾಲಾಗಿ ಪ್ರಾಣ ಉಳಿಸಿಕೊಳ್ಳಲ್ಲು ಪರಾರಿಯಾಗಿದ್ದು ಸಿನಿಮೀಯ ಶೈಲಿಯಲ್ಲಿ ಕಾಲ್ಕಿತ್ತುಕೊಂಡಿದ್ದರೆಂದು ಮಾಹಿತಿ ದೊರೆತಿದೆ.


