ಬೆಂಗಳೂರು : ಸರಕಾರ ಬದಲಾದಾಗ ಇಲಾಖೆಯ ಅಧಿಕಾರಿಗಳು ಬದಲಾಗೋದು ಸಹಜ ಆದರೆ ವರ್ಗಾವಣೆಗೊಂಡ ಸ್ಥಳಕ್ಕೆ ತೆರಳಿ ವರದಿ ಮಾಡಿಕೊಳ್ಳದ 44 ಮಂದಿ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಅಮಾನತುಗೊಳಿಸಲು ಗೃಹ ಇಲಾಖೆ ಮುಂದಾಗಿದೆ.
ಕೆಲವು ಅಧಿಕಾರಿಗಳು ಹಣದ ಮೋಹಕ್ಕೆ ಬಿದ್ದು ಇದ್ದಲ್ಲೇ ಬೀಡುಬಿಟ್ಟಿರುತ್ತಾರೆ,ಹಲವು ತಿಂಗಳು ಕಳೆದರೂ ವರದಿ ಮಾಡಿಕೊಳ್ಳದೆ ಇರುವ ಇನ್ಸ್ಪೆಕ್ಟರ್ಗಳನ್ನು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಪರಿಗಣಿಸಿ ಅವರನ್ನು ಅಮಾನತುಗೊಳಿಸಲು ಇಲಾಖೆ ನಿರ್ಧರಿಸಿದೆ.
ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಅಥವಾ ಬೇರೆ ಘಟಕಕ್ಕೆ ವರ್ಗಾಯಿಸುವುದು ನಡೆದುಕೊಂಡು ಬAದಿರುವ ಸಾಮಾನ್ಯ ಪ್ರಕ್ರಿಯೆ. ಸೂಚಿಸಿದ ಘಟಕದಲ್ಲಿ ವರ್ಗಾವಣೆಗೊಂಡ ಪೊಲೀಸರು ವರದಿ ಮಾಡಿ ಪಾಲನಾ ವರದಿಯನ್ನು ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಬೇಕು. ಆದರೆ, ಕೆಲ ಪೊಲೀಸ್ ಇನ್ಸ್ಪೆಕ್ಟರ್ಗಳು ವರ್ಗಾವಣೆಯಾಗಿ ಹಲವು ತಿಂಗಳಾದರೂ ವರ್ಗವಾದ ಸ್ಥಳಕ್ಕೆ ವರದಿ ಮಾಡಿಕೊಳ್ಳದೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆ ಅಂತಹವರಿಗೆ ನೋಟಿಸ್ ನೀಡಿ ಉತ್ತರಿಸದಿದ್ದರೆ ಅಮಾನತು ಮಾಡಿ, ಇಲಾಖಾ ವಿಚಾರಣೆಗೊಳಪಡಿಸುವ ಎಚ್ಚರಿಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.
ಈಗಾಗಲೇ ಗೃಹ ಇಲಾಖೆ 44 ಮಂದಿಗೂ ಡಿಸೆಂಬರ್ 7 ರಂದು ನೋಟಿಸ್ ಕಳುಹಿಸಿದೆ. ನೋಟಿಸ್ಗೆ ಉತ್ತರಿಸದಿದ್ದರೆ ಅಂತವರನ್ನು ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡಾವಳಿ) 1965/89 ರ ನಿಯಮ 5 ಪ್ರಕಾರ, ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಗೊಳಪಡಿಸುವುದಾಗಿ ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ ಎಚ್ಚರಿಕೆ ನೀಡಿದ್ದಾರೆ.


