ಬೆಂಗಳೂರು : ವೈಟ್ಫೀಲ್ಡ್ ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ನಡೆಸಿದ ಬಾಂಬರ್ ಕರ್ನಾಟಕ ಮೂಲದವನೇ ಎನ್ನುವುದು ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಪತ್ತೆಯಾಗಿದೆ.
ಬಾಂಬರ್ ಗೆ ಬೆಂಗಳೂರು ಪರಿಚಯ ಚೆನ್ನಾಗಿ ಇತ್ತು. ಆತ ಯಾವ ಸಂಘಟನೆಗೆ ಸೇರಿದವನು ಎಂಬುದೂ ಎನ್ಐಎ ಅಧಿಕಾರಿಗಳಿಗೆ ಗೊತ್ತಾಗಿದೆ. ಶಂಕಿತ ಈ ಹಿಂದೆ ಶಿವನ ಸಮುದ್ರ ಹಾಗೂ ಗುಡ್ಲುಪೇಟೆ, ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ತರಬೇತಿ ನಡೆಸಿರುವ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ.
ಟ್ರಯಲ್ ಬಾಂಬ್ ಸ್ಫೋಟ ನಡೆಸಿರುವ ಮತ್ತು ಸರ್ವೈವಲ್ ಕ್ಯಾಂಪ್ಗಳನ್ನು ನಡೆಸಿರುವ ಬಗ್ಗೆ ತನಿಖೆ ವೇಳೆ ಮಾಹಿತಿ ದೊರೆತಿದ್ದು ತನಿಖಾ ತಂಡಗಳಿಂದ ಬಂಧನ ಕಾರ್ಯಾಚರಣೆ ತೀವ್ರಗೊಂಡಿದೆ.
ಬಾಂಬರ್ ಸ್ಫೋಟದ ದಿನವೇ ಚೆನ್ನೈ ಯಿಂದ ತಿರುಪತಿಗೆ ರೈಲಿನಲ್ಲಿ ತೆರಳಿ ಅಲ್ಲಿಂದ ಬಸ್ ಮೂಲಕ ಬಂದಿದ್ದಾನೆ. ಕೆಆರ್ಪುರ ಬಸ್ ನಿಲ್ದಾಣದಲ್ಲಿ ಇಳಿದು ನಂತರ ಆತ ಮಹದೇವಪುರದ ಗ್ರಫೇಡ್ ಇಂಡಿಯಾ ಸರ್ಕಲ್ (ಬಸ್ ನಿಲ್ದಾಣ) ಬಂದು ಬಸ್ ಬದಲಾವಣೆ ಮಾಡಿದ್ದಾನೆ. ಬಳಿಕ ಬ್ರೂಕ್ ಫೀಲ್ಡ್ ಕಡೆಗಿನ ಬಸ್ ಏರಿ ರಾಮೇಶ್ವರ ಕೆಫೆಗೆ ಆಗಮಿಸಿದ್ದಾನೆ ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ.
ಈ ಹಿಂದೆ ಇದೇ ಬಾಂಬ್ ಅನ್ನು ಕುಕ್ಕರ್ ಮತ್ತು ಸ್ಟೀಲ್ ಬಾಕ್ಸ್ನಲ್ಲಿ ಮಾಡಲಾಗುತ್ತಿತ್ತು. ಆದರೆ, ಶಂಕಿತನು ಅತ್ಯಾಧುನಿಕವಾಗಿ ಸಿಲ್ವರ್ ಪೇಪರ್ ಮತ್ತು ಬ್ಯಾಗ್ ಮೂಲಕ ಸಿದ್ಧಪಡಿಸಿರುವ ಬಗ್ಗೆಯೂ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದೆ.
ಶಂಕಿತ ಬಾಂಬರ್ ಸಂಚಾರಕ್ಕೆ ನೇರ ಮಾರ್ಗಗಳನ್ನು ಬಳಸದೇ ಸುತ್ತಿ ಬಳಸಿ ಬಂದು, ಮತ್ತೆ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಆತನ ರಹಸ್ಯ ತಾಣ ಸೇರಿರುವ ಸಾಧ್ಯತೆ ಇದೆ. ಸದ್ಯ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನ ಹಲವಾರು ಭಾಗದಲ್ಲಿ ಶಂಕಿತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಊಹಾಪೋಹ: ಆದರೆ, ಶಂಕಿತ ಬಾಂಬರ್ ಕರ್ನಾಟಕದವನು ಎಂಬ ವರದಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ ಇವುಗಳೆಲ್ಲ ಊಹಾಪೋಹಗಳು ಎಂದಿದ್ದಾರೆ. ಶಂಕಿತ ಕರ್ನಾಟಕದವನು, ಮಲೆನಾಡಿನವನು ಎಂಬೆಲ್ಲ ಎಂಬ ಊಹಾಪೋಹ ಹರಿಡದಾಡುತ್ತಿವೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಸತ್ಯ ಗೊತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ ೧ರಂದು ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು . ಅದೃಷ್ಟವಶಾತ್ ಸಾವು ಸಂಭವಿಸಿರಲಿಲ್ಲ. ನಂತರ ಆರಂಭದಲ್ಲಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಆ ನಂತರ ಎನ್ಐಎಗೂ ತನಿಖೆಯ ಹೊಣೆ ವಹಿಸಲಾಗಿತ್ತು. ಆದಾಗ್ಯೂ, ಶಂಕಿತನನ್ನು ಬಂಧಿಸಲು ಈವರೆಗೆ ಸಾಧ್ಯವಾಗಿಲ್ಲ.